ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

ಮಂಡ್ಯ: ದರ್ಶನ್ ಹಾಗೂ ಯಶ್ ಜೋಡೆತ್ತಲ್ಲ ನಾನು, ಡಿಕೆಶಿ ಜೋಡೆತ್ತುಗಳು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಾರ್ಯಕರ್ತ ವ್ಯಂಗ್ಯವಾಗಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎರಡು ಎತ್ತುಗಳ ಮಧ್ಯೆ ನಿಂತು ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾವೂ ಒಂಟಿ ಒಂಟಿ ಎತ್ತುಗಳನ್ನು ಜೊತೆ ಹಾಕಿದ್ದೇವೆ, ಆದರೆ ಅವು ಕೂಡಲೇ ಇಲ್ಲ. ಒಂದು ಕನಕಪುರದ ಬಿಳಿ ಎತ್ತು, ಇನ್ನೊಂದು ಹಾಸನದ ಕರಿ ಎತ್ತು. ಕರಿ ಎತ್ತಿನ ಜೊತೆ ಸೇರಿ ಬಿಳಿ ಎತ್ತು ಹಾಳಾಗಿದೆ. ಕರಿ ಎತ್ತಿನ ಜೊತೆ ಸೇರಿ ಹಾಳಾಗಬೇಡ ಎಂದು ಬಿಳಿ ಎತ್ತಿಗೆ ಕಿವಿಮಾತು ಹೇಳಿದ್ದೇನೆ ಎಂದು ಕಾರ್ಯಕರ್ತ ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಮುದಿ ಎತ್ತುಗಳು ಕೆಲಸ ಮಾಡಲ್ಲ, ಮೇ 23ರಂದು ಈ ಮುದಿ ಎತ್ತುಗಳನ್ನು ಸಂತೆಗೆ ಕೊಟ್ಟು ಬಿಡುತ್ತೀವಿ. ಮಂಡ್ಯ ಜನರನ್ನು ದಡ್ಡರು ಮಾಡಬೇಡಿ. ಮುದಿ ಎತ್ತುಗಳನ್ನು ಮಂಡ್ಯ ಜನರು ಸಂತೆಗೆ ಕಳುಹಿಸಲಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ಸುಮಲತಾ ನಡೆಸಿದ ಸುದ್ದಿಗೋಷ್ಠಿ ವೇಳೆ, ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯಿಸಿ, ನಾನೊಬ್ನೇ ಇಲ್ಲ. ನಮ್ ಹೀರೋ ಯಶ್ ಸಹಾ ಇದ್ದಾರೆ. ನಮ್ಮದು ಒಂಟಿ ಎತ್ತಲ್ಲ. ನಮ್ಮದು ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದರು.

ಸಿಎಂ ಕುಮಾರಸ್ವಾಮಿ ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *