– ರೈತರ ಸಾಲಮನ್ನಾ ಅನ್ನೋದು ಮುಗಿಯದ ಅಧ್ಯಾಯ
– ಕುಟುಂಬ ರಾಜಕಾರಣ ಮಾಡೋರಿಂದ ರಚನೆ ಆಗಿದ್ದೇ ಮಹಾಘಟಬಂಧನ್
ಚಿತ್ರದುರ್ಗ: ಮಹಾಘಟಬಂಧನ್ನಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆಯಾದರೆ ಅವರಲ್ಲಿಯೇ ಗೊಂದಲ ಉಂಟಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾಘಟಬಂಧನ್ನಲ್ಲಿ ಸೇರಿರುವ ಅನೇಕ ಪಕ್ಷಗಳ ನಾಯಕರು ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಪ್ರಧಾನಿ ಅಭ್ಯರ್ಥಿ ಹೆಸರನ್ನು ಸೂಚಿಸದೇ ಲೋಕಸಭಾ ಚುನಾವಣೆಗೆ ಮುಂದಾಗುತ್ತಿದ್ದಾರೆ. ಆದರೆ ನಾವು ದೇಶವನ್ನು ಮುನ್ನಡೆಸುವ ನಾಯಕ ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಮಹಾಘಟಬಂಧನ್ನಲ್ಲಿರುವ ನಾಯಕರು ಯಾವುದೇ ಸಾಧನೆ ಮಾಡಿಲ್ಲ. ಸ್ವಹಿತಾಸಕ್ತಿ ಸಾಧಿಸಿಕೊಳ್ಳುವ ಉದ್ದೇಶದಿಂದ ಕೆಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಮಹಾಮೈತ್ರಿಗೆ ನೀಡುತ್ತಿವೆ. ಈ ಮೂಲಕ ತಮ್ಮ ಮೇಲಿರುವ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿದ್ದಾರೆ. ರೈತರ ಬೆಳೆಗೆ ಬೆಂಬಲ ಬೆಲೆ ನೀಡಿದ್ದಾರೆ ಎಂದ ಅವರು, ರೈತರ ಸಾಲಮನ್ನಾ ಪ್ರತಿ ವರ್ಷ ಮಾಡಲೇಬೇಕು. ಅದೊಂದು ಮುಗಿಯದ ಅಧ್ಯಾಯ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಾಗಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಈ ಪಕ್ಷಗಳಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದೇ ಗೊಂದಲವಾಗಿದೆ. ಜೆಡಿಎಸ್ನವರು ನಮ್ಮ ಸಿಎಂ ಕುಮಾರಸ್ವಾಮಿ ಅಂತ ಹೇಳುತ್ತಾರೆ. ಇತ್ತ ಕಾಂಗ್ರೆಸ್ನವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಭಾಷಣ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಹೆಚ್ಚು ಹಣ, ಅನುದಾನ ಬರುವ ಖಾತೆ ಮತ್ತು ನಿಗಮಗಳಿಗೆ ಮೈತ್ರಿ ಪಕ್ಷದವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ 22ರಿಂದ 25 ಲೋಕಸಭೆ ಚುನಾವಣೆಯಲ್ಲಿ ನಾವು (ಬಿಜೆಪಿ) ಗೆಲ್ಲಲಿದ್ದೇವೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply