ಬೈಕ್ ನಿಯಂತ್ರಣ ತಪ್ಪಿ ಅಪಘಾತ- ಕಬ್ಬಿಣದ ಸರಳುಗಳು ಚುಚ್ಚಿ ಮೂವರ ದುರ್ಮರಣ

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಪಲ್ಸರ್ ಬೈಕ್ ಕೆಳಗೆ ಬಿದ್ದು, ಕಬ್ಬಿಣದ ಸರಳುಗಳು ಚುಚ್ಚಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ.

ಅಪಘಾತದಲ್ಲಿ 25 ವರ್ಷದ ಮುರಳಿ, 22 ವರ್ಷದ ಭಾರ್ಗವ್ ಹಾಗೂ 24 ವರ್ಷದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಮೂಲತಃ ಆಂಧ್ರದ ಚಿಲಮತ್ತೂರು ಜಿಲ್ಲೆಯ ಮದನಪಲ್ಲಿ ಬಳಿಯ ಗಾಜುವಾರಲಪಲ್ಲಿ ನಿವಾಸಿಗಳು ಅಂತ ತಿಳಿದುಬಂದಿದೆ. ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಐಮರೆಡ್ಡಿಹಳ್ಳಿ ರೈಲ್ವೆ ಅಂಡರ್ ಪಾಸ್ ಕೆಳಗೆ ಅಪಘಾತವಾಗಿದ್ದು, ಸೇತುವೆ ಕೆಳಗಿನ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು. ಹೀಗಾಗಿ ರಸ್ತೆಯ ಅರ್ಧ ಭಾಗ ಮಾತ್ರ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು ಉಳಿದ ಅರ್ಧ ಭಾಗದ ರಸ್ತೆ ಮಾಡಲಾಗಿರಲಿಲ್ಲ. ಇದ್ರಿಂದ ಪಲ್ಸರ್ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಘಟನೆಯಲ್ಲಿ ಸಿಮೆಂಟ್ ರಸ್ತೆಯ ಕಾಂಕ್ರೀಟ್ ಗೆ ಹಾಕಲಾಗಿದ್ದ ಭಾರಿ ಗಾತ್ರದ ಕಬ್ಬಿಣದ ಸರಳುಗಳು ಯುವಕರಿಗೆ ಚುಚ್ಚಿ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *