ದೋಸ್ತ ನನ್ನ ಪಾಲಿನ ದೇವರು: ಧನರಾಜ್‌ ಬಗ್ಗೆ ಹನುಮಂತನ ಮನದಾಳ

– ನಾನು ಬಿಗ್‌ ಬಾಸ್‌ ಮನೆಯಲ್ಲಿರೋಕೆ ದೋಸ್ತನೇ ಕಾರಣ
– ಇದು ನನ್ನ ಗೆಲುವಲ್ಲ, ಕರ್ನಾಟಕ ಜನತೆಯ ಗೆಲುವು

ಬಿಗ್‌ ಬಾಸ್‌ ಕನ್ನಡ 11ರ (Bigg Boss Kannada 11) ವಿನ್ನರ್‌ ಹನುಮಂತ (Hanumantha) ದೊಡ್ಮನೆಯ ತನ್ನ ದೋಸ್ತನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ದೋಸ್ತ ಧನರಾಜ್‌ ನನ್ನ ಪಾಲಿನ ದೇವರು ಎಂದು ಬಣ್ಣಿಸಿದ್ದಾರೆ.

ಬಿಗ್‌ ಬಾಸ್‌ನಲ್ಲಿದ್ದ ಎಲ್ಲಾ ಸ್ಪರ್ಧಿಗಳು ಒಳ್ಳೆಯವರು. ಆಟ ಅಂತ ಬಂದಾಗ ಸ್ವಲ್ಪ ಮನಸ್ತಾಪಗಳಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಬಿಗ್‌ ಬಾಸ್‌ನಲ್ಲಿ ನನ್ನ ದೋಸ್ತರೆಲ್ಲ ಬಹಳ ಸಪೋರ್ಟ್‌ ಮಾಡಿದ್ರು ಎಂದು ಸ್ಪರ್ಧಿಗಳ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಬಿಗ್‌ ಬಾಸ್‌ ಶೋ ಕಪ್‌ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್‌ ಹನುಮಂತ

ಧನರಾಜ್‌ ಬಗ್ಗೆ ಮಾತನಾಡಿ, ದೋಸ್ತನ ಬಗ್ಗೆ ಹೇಳಬೇಕಂದ್ರೆ, ಆತ ದೇವರು. ನನ್ನ ಪಾಲಿನ ದೇವರು. ಒಳ್ಳೆ ಮನಸ್ಸಿರುವ ವ್ಯಕ್ತಿ. ನನ್ನ ಮತ್ತು ಅವನ ಸ್ವಭಾವ ಒಂದೇ. ಹಾಗಾಗಿ, ನನಗೆ ಆತ ಬಹಳ ಹತ್ತಿರ. ಬಿಗ್‌ ಬಾಸ್‌ ಮನೆಯೊಳಗೆ ನಾನು ಇರಬೇಕೆಂದರೆ ಆತನೇ ಕಾರಣ. ನನ್ನ ಜೊತೆ ಅಷ್ಟು ಹತ್ತಿರ ಇದ್ದು, ಬೇಜಾರಾದಾಗ ಸಮಾಧಾನ ಮಾಡುತ್ತಿದ್ದ. ಈಗ ಹೊರಗಡೆ ಬಂದ ಮೇಲೆ ಬೇಜಾರಾಗ್ತಿದೆ ಎಂದು ತಮ್ಮಿಬ್ಬರ ದೋಸ್ತಿ ಬಗ್ಗೆ ಹೇಳಿದರು.

ಫಿನಾಲೆಯಲ್ಲಿ ವಿನ್ನರ್‌ ಘೋಷಣೆ ಸಂದರ್ಭದ ಅನುಭವದ ಬಗ್ಗೆ ಮಾತನಾಡಿ, ವಿನ್ನರ್‌ ಘೋಷಣೆಗೆ ಸುದೀಪ್‌ ಸರ್‌ ಕೈ ಹಿಡಿದುಕೊಂಡಿದ್ದಾಗ ಉಚ್ಚೆಯೇ ಬಂದಿತ್ತು ನನಗೆ. ವೋಟ್‌ ಪ್ರಕಾರ ವಿನ್ನರ್‌ ಹೇಳ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಇಲ್ಲಿ ತನಕ ಬಂದಿರುವುದೇ ದೊಡ್ಡ ಕಥೆಯಾಗಿದೆ. ನನಗೆ ಕಪ್‌ ಕೊಡ್ತಾರಾ ಅಂದುಕೊಂಡಿದ್ದೆ. ರಜತ್‌ ಅಣ್ಣ ಔಟಾದಾಗ, ಅಯ್ಯೋ ನಾನಿನ್ನೂ ಉಳಿದುಕೊಂಡಿದ್ದೀನಾ ಅಂತ ಅನಿಸಿತ್ತು. ಇದನ್ನೂ ಓದಿ: ‌’ಬಿಗ್‌ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ

ಇದು ನನ್ನ ಗೆಲುವಲ್ಲ. ಕರ್ನಾಟಕದ ಜನತೆಯ ಜಯ. ಜನ ಮನಸ್ಸಿಂದ ಮೆಚ್ಚಿ ಗೆಲ್ಲಿಸಿದ್ದಾರೆ. ಅವರ ಆಶೀರ್ವಾದದಿಂದ ಗೆದ್ದಿದ್ದೀನಿ. 5 ಕೋಟಿ ವೋಟ್‌ ಬರುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಕಪ್‌ ತೆಗೆದುಕೊಂಡು ಅಮ್ಮ-ಅಪ್ಪ, ಹನುಮಪ್ಪ ದೇವರು, ಸೇವಾಲಾಲ್‌ ದೇವರ ಮುಂದಿಟ್ಟು ಆಶೀರ್ವಾದ ಪಡೆಯುತ್ತೇನೆ.