ಮೋರಿ ಒಳಗೆ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು-ಗುಡಿಬಂಡೆ ಮಾರ್ಗದ ಮುಖ್ಯರಸ್ತೆಯ ಮೋರಿ ಒಳಗಡೆ ಅಪರಿಚಿತ ಯುವತಿಯ ಗುರುತು ಪತ್ತೆಯಾಗಿತ್ತು. ಮೃತ ಯುವತಿಯನ್ನ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಯುವತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರಳೂರು ನಾಗೇನಹಳ್ಳಿಯ 22 ವರ್ಷದ ಭಾಗ್ಯಶ್ರೀ ಅಂತ ತಿಳಿದು ಬಂದಿದೆ. ಮೃತ ಭಾಗ್ಯ ಶ್ರೀ ಕನ್ನಮಂಗಲಪಾಳ್ಯ ಬಳಿಯ ಮನಿ ಟ್ರಾನ್ಸ್ ಫಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕಚೇರಿಯ 5 ಲಕ್ಷ ಹಣವನ್ನ ದೇವನಹಳ್ಳಿಯ ಕಚೇರಿಗೆ ತೆಗೆದುಕೊಂಡು ಹೋಗುವಾಗ ಭಾಗ್ಯಶ್ರೀ ನಿಗೂಢವಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಹಣಕ್ಕಾಗಿಯೇ ಭಾಗ್ಯಶ್ರೀ ಅವರ ಕೊಲೆ ಮಾಡಿರಬಹುದು ಅಂತ ಪೊಲೀಸರ ಅನುಮಾನ ಬಲವಾಗಿದೆ.

ಈಗಾಗಲೇ ಕೊಲೆಗಾರರಿಗಾಗಿ ಪೊಲೀಸರು ಹುಡಕಾಟ ಶುರು ಮಾಡಿದ್ದಾರೆ. ಅಂದ ಹಾಗೆ ಮೃತಳ ಪೋಷಕರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬುಧವಾರ ಯುವತಿ ಶವ ಪತ್ತೆ ಸುದ್ದಿ ತಿಳಿದು ಎರಡನ್ನ ಹೋಲಿಕೆ ಮಾಡಿದಾಗ ಮೃತ ಯುವತಿ ಭಾಗ್ಯ ಶ್ರೀ ಅಂತ ತಿಳಿದು ಬಂದಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಳನೆ ನಡೆಸಿದ್ದರು. ಸದ್ಯ ಮೃತದೇಹವನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *