ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿಯಿಂದ ಬಹಿಷ್ಕಾರ

ಬೀದರ್: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹಳ್ಳಿಖೇಡ್ ಬಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ನೀಡುವುದನ್ನು ಬಿಟ್ಟು ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಬಹಿಷ್ಕಾರ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ.

ಅತ್ಯಾಚಾರದ ವಿರುದ್ಧ ಪೊಲೀಸರಿಗೆ ನೀಡಿದ ದೂರು ವಾಪಸ್ ತೆಗೆದುಕೊಳ್ಳಿ ಎಂದು ಮೌಲಾಲಿ ಮತ್ತು ದರ್ಗಾ ಸಮಿತಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಒತ್ತಡ ಹೇರಿದ್ದು, 20 ದಿನಗಳಿಂದ ಕುಟುಂಬವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆರೋಪಿ ಅಕ್ರಮ್ ಶಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಬೆದರಿಕೆಯೊಡ್ಡಿದ್ದ. ನಂತರ ಪೋಷಕರು ಮದುವೆಗೆ ಬಾರದೆ ಇದ್ದರೂ ದರ್ಗಾ ಸಮಿತಿಯಲ್ಲಿ ಮದುವೆ ಮಾಡಲಾಗಿತ್ತು. ನಂತರ ಆರೋಪಿ ಅಕ್ರಮ್ ಶಾ ಬಾಲಕಿಯನ್ನು ಗರ್ಭಿಣಿ ಮಾಡಿ, ನಿನಗೆ ಅಡುಗೆ ಬರಲ್ಲ ಎಂದು ಹೇಳಿ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

4 ತಿಂಗಳ ಹಿಂದೆ ಈ ಕುರಿತು ಹಳ್ಳಿಖೇಡ್ ಬಿ ಪೊಲೀಸ್ ಠಾಣೆಯಲ್ಲಿ ಅಕ್ರಮ್ ಹಾಗೂ ಮದುವೆಗೆ ಸಹಕರಿಸಿದವರ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಅಕ್ರಮ್‍ನನ್ನು ಮಾತ್ರ ಬಂಧಿಸಿದ್ದು ಇನ್ನುಳಿದ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೆ ಮೌಲಾಲಿ ಸುಲೇಮಾನ್ ಹಮ್ಮದ್ ಬಾಲಕಿಯ ಕುಟುಂಬಸ್ಥರಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಇದೆಯೋ ಅಥವಾ ಸತ್ತಿದೆಯೋ ಎಂದು ಅಖಿಲ ಕರ್ನಾಟಕ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆಎಸ್ ಲಕ್ಷ್ಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *