ಸಂಸದ ಖೂಬಾಗೆ ಸೊಕ್ಕು ಜಾಸ್ತಿಯಾಗಿದೆ – ರಹೀಂ ಖಾನ್

– ಮೋದಿಯಿಂದ ನಾನು ಗೆದ್ದಿಲ್ಲ
– ಮನ್ಸೂರ್‍ ನನ್ನು ಹಿಡಿದು ತರುತ್ತಾರೆ

ಬೀದರ್: ಸಂಸದ ಭಗವಂತ್ ಖೂಬಾಗೆ ಸೊಕ್ಕು ಜಾಸ್ತಿಯಾಗಿದೆ. ಅವರಿಗೆ ನಾಲಿಗೆ ಮೇಲೆ ಕಂಟ್ರೋಲ್ ಇಲ್ಲ ಎಂದು ಸಚಿವ ರಹೀಂ ಖಾನ್ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಿಗೆ ಪಾಗಲ್ ಅಂತಿದ್ದಾರೆ. ವೈದ್ಯರಿಗೆ ನಾಯಿ ಅನ್ನುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ನಾಲಾಯಕ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಇವೆಲ್ಲವನ್ನು ನೋಡಿದರೆ ಅವರಿಗೆ ಸೊಕ್ಕು ಜಾಸ್ತಿಯಾಗಿದೆ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೊಡ್ಡ ಸ್ಥಾನದಲ್ಲಿ ಇರುವವರಿಗೆ ನಾಲಿಗೆ ಮೇಲೆ ಹಿಡಿತ ಇರಬೇಕು. ಅವರಿಗೆ ನಾಲಿಗೆ ಮೇಲೆ ಕಂಟ್ರೋಲ್ ಇಲ್ಲ. ನಾನು ಮೂರು ಸಲ ಶಾಸಕನಾಗಿದ್ದೇನೆ. ಆದರೆ ನಾನು ಪ್ರಧಾನಿ ಮೋದಿ ಅವರ ಹೆಸರಿನ ಮೇಲೆ ಮತ ಕೇಳಿಲ್ಲ. ಮೋದಿ ಗಾಳಿ ಮೇಲೆ ನಾನು ಗೆದ್ದಿಲ್ಲ ಎಂದು ಭಗವಂತ್ ಖೂಬಾ ಅವರ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಐಎಂಎ ವಂಚನೆ ಪ್ರಕರಣ ಕುರಿತು ಮಾತನಾಡಿ, ಐಎಂಎ ವಂಚನೆ ಪ್ರಕರಣದ ಮುಖ್ಯಸ್ಥ ಮನ್ಸೂರ್ ಖಾನ್ ದುಬೈನಲ್ಲಿ ಇದ್ದಾನೆ ಎಂದು ಪಬ್ಲಿಕ್ ಟಿವಿ ಎಕ್ಸ್ ಕ್ಲೂಸೀವ್ ಮಾಹಿತಿ ಬಿತ್ತರಿಸಿದ ಹಿನ್ನೆಲೆಯಲ್ಲಿ ನೂರಕ್ಕೆ ನೂರರಷ್ಟು ಹಿಡಿದುಕೊಂಡು ಬರುತ್ತಾರೆ. ದೊಡ್ಡ ದೊಡ್ಡ ಹಗರಣಗಳನ್ನು ಮಾಡಿದ ಎಲ್ಲರನ್ನು ಹಿಡಿದುಕೊಂಡು ಬಂದಿದ್ದಾರೆ. ಹಾಗೇಯೇ ಇವರನ್ನು ಹಿಡಿದುಕೊಂಡು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *