ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

ತುಮಕೂರು: ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎನ್ನುವ ಬೇಡಿಕೆಗೆ ಹಲವು ನಾಯಕರು ಧ್ವನಿಗೂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪತ್ರವನ್ನು ಕಳುಹಿಸಿದ್ದೇನೆ ಎಂದು ತಿಳಿಸಿದರು.

ಪೂಜ್ಯ ಶ್ರೀಗಳಿಗೆ ಆದಷ್ಟು ಬೇಗ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದು ನಮ್ಮೆಲ್ಲರ ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

ಯಾವಾಗಲೋ ಭಾರತ ರತ್ನ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚರ್ಚೆ ನಡೆಸಿ, ಆದಷ್ಟು ಬೇಗ ಶ್ರೀಗಳಿಗೆ ಭಾರತ ರತ್ನ ಸಿಗುವಂತೆ ಶ್ರಮಿಸಬೇಕು. ಶ್ರೀಗಳಿಗೆ ಭಾರತ ರತ್ನ ನೀಡಿದರೆ, ಪುರಸ್ಕರಕ್ಕೆ ಮತ್ತಷ್ಟು ಗೌರವ ಬರುತ್ತದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಆಗ್ರಹಿಸಿದರು.

ಸಾರ್ವಜನಿಕರು ಕೂಡ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಕೂಡ ಶಿವಕುಮಾರ ಸ್ವಾಮೀಜಿ ಭಾರತ ರತ್ನ ಗೌರವ ಅಂತ ಆಗ್ರಹಿಸಿ ಅಭಿಯಾನ ಆರಂಭಿಸಿದೆ. ಇದನ್ನು ಓದಿ: ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

ಶ್ರೀಗಳ ಭಾವಚಿತ್ರ ಅನಾವರಣ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಿಡಿಸಿದ್ದು, ಅದನ್ನು ಕಿರಿಯ ಶ್ರೀಗಳು ಅನಾವರಣ ಮಾಡಿದರು.

ಪ್ರಾರ್ಥನೆ ಮುಗಿಸಿದ ಬಳಿಕ ಭಾವಚಿತ್ರವನ್ನು ಅನಾವರಣ ಮಾಡಿದ ಕಿರಿಯ ಶ್ರೀಗಳು, ವಾಸ್ತವಕ್ಕೆ ಹತ್ತಿರ ಇರುವ ಶಿವಕುಮಾರ ಸ್ವಾಮೀಜಿಗಳ ಚಿತ್ರವನ್ನೇ ವಿದ್ಯಾರ್ಥಿ ಬಿಡಿಸಿದ್ದಾನೆ ಎಂದು ಕಿರಿಯ ಶ್ರೀಗಳು ಕೊಂಡಾಡಿದರು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಶ್ರೀಗಳಿಗೆ ಮತ್ತಷ್ಟು ಆರೋಗ್ಯ ಹಾಗೂ ಆಯಸ್ಸನ್ನು ಕರುಣಿಸಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *