ನಂದಿಗಿರಿಧಾಮಕ್ಕೂ ತಟ್ಟಿದ ಬಂದ್ ಬಿಸಿ

ಚಿಕ್ಕಬಳ್ಳಾಪುರ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೂ ಬಂದ್‍ನ ಬಿಸಿ ತಟ್ಟಿದ್ದು, ನಂದಿಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಪ್ರತಿನಿತ್ಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ನಂದಿಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬೆಳ್ಳಂಬೆಳಿಗ್ಗೆ ಸೂರ್ಯೋದಯ ಕಣ್ತುಂಬಿಕೊಳ್ಳಲು ಎಂದಿನಂತೆ ಪ್ರವಾಸಿಗರು ಆಗಮಿಸಿದರೂ ಸೂರ್ಯೋದಯದ ನಂತರ ಪ್ರವಾಸಿಗರ ಆಗಮನ ಕಡಿಮೆಯಾಗಿದೆ. ಹೀಗಾಗಿ ನಂದಿಗಿರಿಧಾಮಕ್ಕೂ ಬಂದ್ ಬಿಸಿ ತಟ್ಟಿದೆ.

ಅಂದಹಾಗೆ ಪ್ರತಿ ದಿನ ಸರಾಸರಿ 3 ರಿಂದ 4 ಸಾವಿರ ಹಾಗೂ ವೀಕೆಂಡ್‌ನಲ್ಲಿ 10 ರಿಂದ 15 ಸಾವಿರ ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಬಂದು ಹೋಗುತ್ತಾರೆ. ಆದರೆ ಇಂದು ಬಂದ್ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಇನ್ನೂ ಭಾರತ್ ಬಂದ್‍ಗೆ ರಾಜ್ಯದ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಮಾತ್ರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐಎಂ ಮುಖಂಡರು ರಸ್ತೆಗಿಳಿದು ಬಲವಂತವಾಗಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದು, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ.

Comments

Leave a Reply

Your email address will not be published. Required fields are marked *