ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

ಬೆಂಗಳೂರು: ಜೆಕೆ ಆದಿ ನಿರ್ದೇಶನದ ಚೊಚ್ಚಲ ಚಿತ್ರ ಭಾನು ವೆಡ್ಸ್ ಭೂಮಿ. ಪೂರ್ವಿ ಕ್ರಿಯೇಷನ್ಸ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಸದ್ದು ಮಾಡುತ್ತಿರೋದೇ ಹಾಡುಗಳ ಮೂಲಕ. ಎಲ್ಲ ಹಾಡುಗಳೂ ಕೂಡಾ ಕಥೆಯ ನವಿರುತನವನ್ನೇ ಹೊದ್ದುಕೊಂಡಂತೆ ಮೂಡಿ ಬಂದ ಕೇಳುಗರಿಗೆಲ್ಲ ಖುಷಿ ನೀಡಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದ ಜೊತೆಗೇ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾನು ವೆಡ್ಸ್ ಭೂಮಿ ಎಂಬ ಹೆಸರೇ ಮುದ್ದಾದೊಂದು ಲವ್ ಸ್ಟೋರಿಯ ಘಮವನ್ನಿಟ್ಟಿಕೊಂಡಿದೆ. ಇದರಲ್ಲಿ ವಿಶೇಷವಾದ ಒಂದು ಹಾಡನ್ನು ರಂಗಾಯಣ ರಘು ಹಾಡಿದ್ದಾರೆ. ಅಂದಹಾಗೆ ನಟನೆ ಬಿಟ್ಟು ಬೇರೆ ಯಾವುದರತ್ತಲೂ ಗಮನ ಹರಿಸದ ರಘು ಹಾಡಲು ಮನಸು ಮಾಡಿದ್ದು ತಮ್ಮ ಗೆಳೆಯನಿಗೋಸ್ಕರ. ಈ ಚಿತ್ರದಲ್ಲಿ ಶೋಭರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೇ ಖುದ್ದಾಗಿ ಒತ್ತಾಯ ಮಾಡಿದ ಪರಿಣಾಮವಾಗಿಯೇ ರಂಗಾಯಣ ರಘು ಹಾಡಿದ್ದಾರೆ. ಆ ಹಾಡೂ ಕೂಡಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.

ರಂಗಾಯಣ ಹಾಡಿರೋ ಈ ಹಾಡಿಗೆ ಶೋಭರಾಜ್ ನೃತ್ಯ ಮಾಡಿರೋದು ಮತ್ತೊಂದು ವಿಶೇಷ. ಹೀಗೆ ನಿರ್ದೇಶಕ ಜೆಕೆ ಆದಿ ಭಾನು ವೆಡ್ಸ್ ಭೂಮಿಯನ್ನು ಪ್ರತಿಯೊಂದರಲ್ಲಿಯೂ ವಿಶೇಷತೆಗಳನ್ನು ಪೋಣಿಸಿಯೇ ನಿರ್ದೇಶನ ಮಾಡಿದ್ದಾರೆ. ಈವರೆಗೂ ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿರೋ ಆದಿ ಅವರ ಮೊದಲ ಕನಸಿನಂಥಾ ಚಿತ್ರವಿದು. ಈ ಮೂಲಕವೇ ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಡುಗಳ ಕ್ವಾಲಿಟಿಯೇ ಈ ಸಿನಿಮಾಕ್ಕಾಗಿ ಜನ ಕಾತರದಿಂದ ಕಾಯುವಂತೆ ಮಾಡಿದೆ.

Comments

Leave a Reply

Your email address will not be published. Required fields are marked *