ಮಳೆಗೆ ಕೊಳೆಯುತ್ತಿದೆ ದೇಶ, ವಿದೇಶಕ್ಕೆ ರಫ್ತಾಗುತ್ತಿದ್ದ ಲಕ್ಷಾಂತರ ಮೌಲ್ಯದ ವೀಳ್ಯದೆಲೆ

– ವರುಣನ ಆರ್ಭಟಕ್ಕೆ ವೀಳ್ಯದೆಲೆ ಬೆಳೆಗಾರರು ಕಂಗಾಲು

ಹಾವೇರಿ: ಭೋಪಾಲ್, ದೆಹಲಿ ಸೇರಿದಂತೆ ವಿದೇಶಕ್ಕೂ ರಫ್ತಾಗುತ್ತಿದ್ದ ವೀಳ್ಯದೆಲೆ ಧಾರಾಕಾರ ಮಳೆಗೆ ಕೊಳೆಯುತ್ತಿದ್ದು, ಹಾವೇರಿ ಜಿಲ್ಲೆಯ ವೀಳ್ಯದೆಲೆ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯ ಸವಣೂರು ತಾಲೂಕು ಮಾದಾಪುರ ಹಾಗೂ ಕಾರಡಗಿ ಗ್ರಾಮದಲ್ಲಿ ಬೆಳೆದ ಲಕ್ಷಾಂತರ ಮೌಲ್ಯದ ವಿಳ್ಯದೆಲೆ ಮಳೆಗೆ ಹಾನಿಯಾಗಿದೆ. ಮಾದಾಪುರ ಗ್ರಾಮದ ಕೆರೆ ಕೋಡಿ ಒಡೆದು ವೀಳ್ಯದೆಲೆ ಬೆಳೆದ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ ವೀಳ್ಯದೆಲೆ ತೋಟದಲ್ಲಿ ಎರಡರಿಂದ ಮೂರು ಅಡಿ ಎತ್ತರ ನೀರು ನಿಂತಿದೆ. ನೀರು ನಿಂತ ಕಾರಣಕ್ಕೆ ವೀಳ್ಯದೆಲೆ ಕೊಳೆತು ಹೋಗುತ್ತಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗುತ್ತಿರುವುದನ್ನು ಕಂಡು ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ.

ಪ್ರತಿನಿತ್ಯ ಭೋಪಾಲ್, ದೆಹಲಿ, ಕೋಲ್ಕತ್ತಾ, ಉತ್ತರ ಪ್ರದೇಶ, ಕರಾಚಿ ಸೇರಿದಂತೆ ವಿದೇಶಕ್ಕೂ ಇಲ್ಲಿಂದ ವೀಳ್ಯದೆಲೆ ರಫ್ತಾಗುತ್ತಿತ್ತು. ಆದರೆ ಮಳೆಯಿಂದಾಗಿ ಬೆಳೆಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಸವಣೂರು ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ವೀಳ್ಯದೆಲೆ ಸಂಪೂರ್ಣವಾಗಿ ಹಾಳಾಗುತ್ತಿದೆ.

ಕಾರಡಗಿ, ಚಿಲ್ಲೂರಬಡ್ನಿ, ಮಾದಾಪುರ, ಸವಣೂರು ಸೇರಿದಂತೆ ವಿವಿಧ ಕಡೆಯ ವೀಳ್ಯದೆಲೆ ತೋಟ ನಿರಂತರ ಮಳೆಯಿಂದ ಹಾಳಾಗುತ್ತಿವೆ. ಲಕ್ಷಾಂತರ ರುಪಾಯಿ ಬೆಳೆ ಹಾಳಾಗಿದ್ದರಿಂದ ವೀಳ್ಯದೆಲೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *