ಬೆಂಗ್ಳೂರಲ್ಲಿ ಪೊಲೀಸ್ರಿಗೂ ರಕ್ಷಣೆಯಿಲ್ಲ- ಖಾಕಿ ಮೇಲೆ ಹಲ್ಲೆ ಮಾಡಿ ಗನ್ ಹೊತ್ತೊಯ್ದ ದುಷ್ಕರ್ಮಿಗಳು

ಬೆಂಗಳೂರು: ರಾಜ್ಯದ ಜನರನ್ನು ರಕ್ಷಿಸುವ ಪೊಲೀಸರ ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಲೇ ಇರುತ್ತದೆ. ಶುಕ್ರವಾರವೂ ಕೂಡ ರಾಜಧಾನಿ ಬೆಂಗಳೂರಲ್ಲಿ ಎಂಎಲ್‍ಸಿಯೊಬ್ಬರ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ.

ಎಂ ಎಲ್ ಸಿ ಮನೋಹರ್ ಅವರ ಗನ್ ಮ್ಯಾನ್ ಆಗಿರೋ ಪುರುಷೋತ್ತಮ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ನಗರದ ಮೈಸೂರು ರಸ್ತೆಯ ವಿನಾಯಕ ಥಿಯೇಟರ್ ಬಳಿ ಶುಕ್ರವಾರ ರಾತ್ರಿ ಮೂರು ಜನ ಯುವಕರು ಗನ್ ಮ್ಯಾನ್ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಬಳಿ ಇದ್ದ ಗನ್ ಕಿತ್ಕೊಂಡು ಪರಾರಿಯಾಗಿದ್ದಾರೆ.

ಪುರುಷೋತ್ತಮ್ ನಿನ್ನೆ ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಂದರ್ಭದಲ್ಲಿ ವಿನಾಯಕ ಥಿಯೇಟರ್ ಬಳಿ ಇರೋ ಗಣೇಶನ ದೇವಸ್ಥಾನದ ಬದಿಯಲ್ಲೇ ಮೂವರು ಯುವಕರು ಮೂತ್ರ ವಿಸರ್ಜನೆ ಮಾಡ್ತಿದ್ರು. ಇದನ್ನ ಪ್ರಶ್ನಿಸಿದ ಗನ್ ಮ್ಯಾನ್ ಪುರುಷೋತ್ತಮ್ ಮೇಲೆ ಕಂಠಪೂರ್ತಿ ಕುಡಿದಿದ್ದ ಆ ಪುಂಡರು ಕ್ಯಾತೆ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದ ಈ ಗಲಾಟೆಯಲ್ಲಿ ಪುಂಡರು ಕಲ್ಲಿನಿಂದ ಪುರುಷೋತ್ತಮ್ ಮುಖ ಮತ್ತು ತಲೆ ಭಾಗವನ್ನ ಜಜ್ಜಿದ್ದಾರೆ. ಇನ್ನು ಗಲಾಟೆ ನೋಡಿ ಅಕ್ಕ ಪಕ್ಕದವರು ಬರುತ್ತಿದ್ದಂತೆ ಕಿಡಿಗೇಡಿಗಳು, ಗಾಯಗೊಂಡು ಕೆಳಗೆ ಬಿದ್ದಿದ್ದ ಪುರುಷೋತ್ತಮ್ ಬಳಿ ಇರೋ ಗನ್ ನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬಳಿಕ ಸ್ಥಳೀಯರು ಪುರುಷೋತ್ತಮ್‍ರನ್ನು ವಿಕ್ಟೋರಿಯೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಕಾಟನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿ ಪರಾರಿಯಾದ ಕಿಡಿಗೆಡಿಗಳಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಅಂತಾ ದಕ್ಷಿಣ ವಿಭಾಗ ಡಿಸಿಪಿ ಡಾ .ಶರಣಪ್ಪ  ಹೇಳಿದ್ದಾರೆ.

Comments

Leave a Reply

Your email address will not be published. Required fields are marked *