ಬೆಂಗಳೂರು ವಿವಿಯಲ್ಲಿ ಹೊಡೆದಾಟ- ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಬೆಂಗಳೂರು: ಶುಕ್ರವಾರ ತಡರಾತ್ರಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಪಿಜಿ 2 ಹಾಸ್ಟೆಲ್ ನಲ್ಲಿ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ವೇಳೆ ಹೊಡೆದಾಡಿಕೊಂಡಿದ್ದು, ಹಲ್ಲೆ ಮಾಡಿದ ಪಿಹೆಚ್‍ಡಿ ಸೀನಿಯರ್ಸ್‍ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಸ್ಟೆಲ್ ಮುಂದೆ ಉರಿ ಬಿಸಿಲಿನಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಹಾಸ್ಟೆಲ್ ರೂಮ್ ನಲ್ಲಿ ಹುಟ್ಟುಹಬ್ಬ ಸೆಲಬ್ರೇಷನ್ ವೇಳೆ, ಸೀನಿಯರ್ಸ್ ಗುಂಪು ನೇರವಾಗಿ ನಮ್ಮ ರೂಮ್‍ಗೆ ನುಗ್ಗಿ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಸೀನಿಯರ್ ಗಳ ಆಟಾಟೋಪ ಹೆಚ್ಚಾಗಿದೆ. ಯೂನಿವರ್ಸಿಟಿ ಕ್ಯಾಂಪಸ್‍ಗೆ ಕುಡಿದು ಬಂದು ಜೂನಿಯರ್ಸ್ ಗಳನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಪಿಹೆಚ್‍ಡಿ ವಿದ್ಯಾರ್ಥಿಗಳ ಮೇಲೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಘಟನೆ ಸಂಬಂಧ ಎರಡು ಬಣದ 8 ವಿದ್ಯಾರ್ಥಿಗಳನ್ನು ಜ್ಞಾನ ಭಾರತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪಿಜಿ ಹಾಸ್ಟೆಲ್ 2 ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯ ಸ್ವರೂಪ ಹೆಚ್ಚಾಗ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ವಿವಿಯ ಕುಲಪತಿ ವೇಣುಗೋಪಾಲ್ ಭೇಟಿ ನೀಡಿ, ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದ್ರು. ಇದಕ್ಕೆ ಸೊಪ್ಪು ಹಾಕದ ವಿದ್ಯಾರ್ಥಿಗಳು ಕೂಗಾಟ ನಡೆದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ವಿವಿ ಕುಲಪತಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆ ಹಾಸ್ಟೆಲ್‍ನ ಊಟದಲ್ಲಿ ಹಲ್ಲಿ ಬಿದ್ದಿದೆ ಎಂದು ವಿದ್ಯಾರ್ಥಿಗಳು ಊಟವನ್ನು ಹೊರಗಿಟ್ಟು ಪ್ರತಿಭಟಿಸಿದರು.

Comments

Leave a Reply

Your email address will not be published. Required fields are marked *