ರೋಡ್ ರೋಲರ್ ಕದ್ದು ರಸ್ತೆ ಬದಿಯಲ್ಲೇ ಬಿಟ್ಟು ಹೋದ ಕಳ್ಳರು!

ಬೆಂಗಳೂರು: ಹೊತ್ತುಕೊಂಡು ಹೋಗಲು ಸಾಧ್ಯವಾಗುವ ವಸ್ತುಗಳನ್ನೇ ಕಳ್ಳರು ಎಗರಿಸುವುದು ಸಾಮಾನ್ಯ. ಆದರೆ ಸಿಲಿಕಾನ್ ಸಿಟಿಯಲ್ಲಿ ಕೆಲ ಕಳ್ಳರು ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ಕದ್ದು, ಸಾಗಿಸಲು ಸಾಧ್ಯವಾಗದೇ ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.

ರಸ್ತೆ ಕಾಮಗಾರಿ ಗುತ್ತಿಗೆದಾರ ಜ್ಯೋತಿಶ್ ಎಂಬವರಿಗೆ ಸೇರಿದ್ದ ವಾಹನಗಳನ್ನು ಕಳ್ಳರು ಎಗರಿಸಿದ್ದರು. ಜ್ಯೋತಿಶ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲ ದುಷ್ಕರ್ಮಿಗಳೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಟಿಂಬರ್‍ರ್ಯಾರ್ಡ್ ಲೇಔಟ್‍ನಲ್ಲಿ ಗುತ್ತಿಗೆದಾರ ಜ್ಯೋತಿಶ್ ಅವರು ಎರಡೂ ವಾಹನಗಳನ್ನು ನಿಲ್ಲಿಸಿದ್ದರು. ರಾತ್ರಿ ವೇಳೆ ಅಲ್ಲಿಗೆ ಬಂದಿದ್ದ ಕೆಲ ದುಷ್ಕರ್ಮಿಗಳು ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಆದರೆ ವೇಗವಾಗಿ ಚಾಲನೆ ಮಾಡಲಾಗದೇ ರಸ್ತೆ ಬದಿಯಲ್ಲಿಯೇ ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ನಿಲ್ಲಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ರೋಡ್ ರೋಲರ್ ಹಾಗೂ 17 ಲಕ್ಷ ರೂ. ಬೆಲೆಬಾಳುವ ಟಾರ್ ಸಿಂಪಡಿಸುವ ವಾಹನಗಳು ಪುನಃ ಮಾಲೀಕ ಜ್ಯೋತಿಶ್ ಅವರ ಕೈ ಸೇರಿವೆ. ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *