ಸರ್ಕಾರಿ ಬಂಗ್ಲೆಗಾಗಿ ಸಾಹುಕಾರನ ಹುಡುಕಾಟ

ಬೆಂಗಳೂರು: ಸರ್ಕಾರಿ ಬಂಗಲೆಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹುಡುಕಾಟ ನಡೆಸತೊಡಗಿದ್ದಾರೆ. ಕ್ಷೇತ್ರದ ಜನರು ಮತ್ತು ಅಧಿಕಾರಿಗಳ ಭೇಟಿಗೆ ಮನೆ ಇಲ್ಲದೆ ಸಮಸ್ಯೆ ಆಗಿದೆ. ಹೀಗಾಗಿ ಆದಷ್ಟು ಬೇಗ ಸರ್ಕಾರಿ ನಿವಾಸ ನೀಡಿ ಎಂದು ಸಾಹುಕಾರ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ.

ಹಿಂದಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿರುವುದರಿಂದ ಸಚಿವ ರಮೇಶ್ ಜಾರಕಿಹೊಳಿಗೆ ಈ ಸಮಸ್ಯೆ ಎದುರಾಗಿದೆ. ಪ್ರಸ್ತುತ ಮಂತ್ರಿಗ್ರೀನ್ಸ್ ನ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿರುವ ರಮೇಶ್ ಜಾರಕಿಹೊಳಿಗೆ ಖಾಸಗಿ ನಿವಾಸಕ್ಕೆ ಜನ, ಅಧಿಕಾರಿಗಳನ್ನು ಕರೆಸಿ ಮಾತನಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಹಾಗೂ ಅಧಿಕಾರಿಗಳ ಭೇಟಿಗೆ ರಮೇಶ್ ಜಾರಕಿಹೊಳಿಗೆ ಸಮಸ್ಯೆ ಆಗಿದೆ.

ಸದಾಶಿವನಗರದ ಬಿಡಿಎ ಕ್ವಾಟ್ರಸ್‍ಗಾಗಿ ರಮೇಶ್ ಜಾರಕಿಹೊಳಿ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಹಿಂದಿದ್ದ ಸವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೂ ಗೋಕಾಕ್ ಸಾಹುಕಾರ ಬೇಡಿಕೆ ಇಟ್ಟಿದ್ದರು. ಆದರೆ ಪ್ರಸ್ತುತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ಸವೆನ್ ಮಿನಿಸ್ಟರ್ ನಿವಾಸ ಹಂಚಿಕೆಯಾಗಿದೆ.

ಜಯಮಹಲ್ ಬಳಿ ಎರಡು ಸರ್ಕಾರಿ ಬಂಗ್ಲೆಗಳು ಖಾಲಿ ಇವೆ ಆದರೆ ಜಾಗ ಜಾಸ್ತಿ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. 9 ಸಚಿವರುಗಳಿಗೆ ಸರ್ಕಾರಿ ನಿವಾಸ ಕೊಡಬೇಕಿದೆ. ಆದರೆ ಸೂಕ್ತ ಬಂಗಲೆ ಸಿಗದೆ ಸಚಿವ ರಮೇಶ್ ಜಾರಕಿಹೊಳಿ ಏನಾದರು ಮಾಡಿ ಆದಷ್ಟು ಬೇಗ ಒಳ್ಳೆ ಸರ್ಕಾರಿ ಬಂಗಲೆ ಕೊಡಿ ಎಂದು ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *