ಎಣ್ಣೆ ಬಾಟಲ್‍ಗಾಗಿ ವ್ಯಕ್ತಿಯ ಬರ್ಬರ ಕೊಲೆ: ಮೂವರು ಅರೆಸ್ಟ್

ಬೆಂಗಳೂರು: ಮದ್ಯ ಇರುವ ಬಾಟಲ್‍ಗಾಗಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಯುವಕರನ್ನು ಪುಲಿಕೇಶಿನಗರ ಪೊಲೀಸರು ಇಂದು ಬಂಧಿಸಿದ್ದಾರೆ.

ಪುಲಿಕೇಶಿನಗರ ಸತ್ಯಶೀಲನ್ ಕೊಲೆಯಾಗಿದ್ದ ವ್ಯಕ್ತಿ. ಸೆಲ್ವರಾಜ್ ತುಳಸಿರಾಮ (18), ಲೋಕೇಶ್ (20) ಹಾಗೂ ಸುನೀಲ್ ಕುಮಾರ್ (24) ಬಂಧಿತ ಯುವಕರು. ಈ ಘಟನೆಯು ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ನಡೆದಿತ್ತು.

ಆಗಿದ್ದೇನು?:
ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ರಾತ್ರಿ ಸತ್ಯಶೀಲನ್ ಕೈಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಹೋಗುತ್ತಿದ್ದ. ಈ ವೇಳೆ ಲೋಕೇಶ್, ಸೆಲ್ವರಾಜ್ ಹಾಗೂ ಸುನೀಲ್ ಮದ್ಯ ಹುಡುಕಾಡುತ್ತಿದ್ದರು. ಸತ್ಯಶೀಲನ್ ಕೈಯಲ್ಲಿದ್ದ ಮದ್ಯದ ಬಾಟಲ್ ನೋಡಿದ ಯುವಕರು, ಮೊದಲಿಗೆ ಮದ್ಯ ಕೊಡುವಂತೆ ಕೇಳಿದ್ದಾರೆ. ಆದರೆ ಸತ್ಯಶೀಲನ್ ಮದ್ಯ ಬಾಟಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಚಾಕುವಿನಿಂದ ಇರಿದು, ಬಾಟಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪುಲಿಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಆರೋಪಿಗಳನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *