ಕುಡಿಯಲು ಹಣವಿಲ್ಲದಿದ್ದಾಗ ಟ್ರೈನಿನಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ

– ಕದ್ದ ಹಣದಲ್ಲಿ ಮೈಸೂರಿನಲ್ಲಿ ಪಾರ್ಟಿ

ಬೆಂಗಳೂರು: ಎಣ್ಣೆ ಹೊಡೆಯೋಕೆ ದುಡ್ಡಿಲ್ಲದಿದ್ದರೆ ಏನಂತೆ, ಸೊಂಪಾಗಿ ಸಿಲಿಕಾನ್ ಸಿಟಿ ಇದ್ಯಲ್ಲಾ ಎಂಬ ಮೈಂಡ್ ಸೆಟ್ ಅವರದ್ದು. ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಕೈಚಳಕ ತೋರುತ್ತಿದ್ದ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತ ಆರೋಪಿಗಳು. ಬೆಂಗಳೂರಲ್ಲಿ ಓಡಾಡಲಿಕ್ಕೆ ಬಾಡಿಗೆ ಬೈಕ್ ಪಡೆಯುತ್ತಿದ್ದ ಆರೋಪಿಗಳು, ಕಳ್ಳತನ ಮಾಡಿ ಪುನಃ ಮೈಸೂರು ಸೇರಿಕೊಳ್ಳುತ್ತಿದ್ದರು. ಈಗ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಂದ ಖರ್ತನಾಕ್ ಆರೋಪಿಗಳು ಸೆರೆಸಿಕ್ಕಿದ್ದಾರೆ.

ಕುಡಿಯಲಿಕ್ಕೆ ಹಣವಿಲ್ಲದಿದ್ದಾಗ ಟ್ರೈನ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದರು. ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದರು. ಒಬ್ಬರೇ ಮಾರಾಟಗಾರರು ಇರುವ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ಮೊದಲು ಒಬ್ಬ ಅಂಗಡಿಗೆ ಬಂದು ವ್ಯಾಪಾರ ಮಾಡಿ ಪರಿಸ್ಥಿತಿ ಅವಲೋಕಿಸುತ್ತಿದ್ದ. ನಂತರ ಮತ್ತೊಬ್ಬ ಬಂದು ಅಂಗಡಿಯಲ್ಲಿರದ ವಸ್ತುಗಳನ್ನು ಕೇಳುತ್ತಿದ್ದ. ಈ ವೇಳೆ ಗಮನ ಬೇರೆ ಕಡೆ ಸೆಳೆದು ಪೆಟ್ಟಿಗೆಯಿಂದ ಹಣ ಕದ್ದು ಪರಾರಿ ಆಗುತ್ತಿದ್ದರು.

ಅಂಗಡಿಯಲ್ಲಿ ಕೆಲ ವಸ್ತುಗಳು ಇಲ್ಲ ಎಂದಾದಾಗ ಬೇರೆ ಕಡೆಯಿಂದ ತಂದುಕೊಡಿ ಅಂತಿದ್ದ ಆರೋಪಿಗಳು ಅಂಗಡಿಯವರು ಬೇರೆಡೆಯಿಂದ ಅಥವಾ ಗೋಡೌನ್ ನಿಂದ ತರಲಿಕ್ಕೆ ಹೋದಾಗ ಕೈ ಚಳಕ ತೋರುತ್ತಿದ್ದರು. ಕಳೆದ ಮಾರ್ಚ್ 3 ರಂದು ಬನಶಂಕರಿಯಲ್ಲಿ ಕೈಚಳಕ ತೋರಿದ್ದ ಆರೋಪಿಗಳು, ಲೋಕೆಶ್ ಎಂಬುವರ ಬುಕ್ ಸ್ಟೋರ್ ನಲ್ಲಿ 50 ಸಾವಿರ ಹಣ ಎಗರಿಸಿದ್ದರು.

ಅಂಗಡಿಯ ಗೋಡೌನ್‍ನಿಂದ ಥರ್ಮಕೋಲ್ ತಂದುಕೊಡುವಂತೆ ತಿಳಿಸಿ ಹಣ ಎಗರಿಸಿ ಎಸ್ಕೇಪ್ ಆಗಿದ್ದರು. ಬೆಂಗಳೂರಲ್ಲಿ ಕೈಚಳಕ ತೋರಿ ಕದ್ದ ಹಣದಲ್ಲಿ ಮೈಸೂರಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *