ಮಾರ್ಚ್ 2ನೇ ವಾರದಲ್ಲಿ ಮೌಲ್ಯಾಂಕನ ಪರೀಕ್ಷೆ- ಮಾಹಿತಿ ಮಿಸ್ ಆದ್ರೆ ಶಿಕ್ಷಕರೇ ಹೊಣೆ

ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಮಾರ್ಚ್ 2 ನೇ ವಾರ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ. ಈ ಸಂಬಂಧ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಆದೇಶ ಹೊರಡಿಸಿರುವ ಇಲಾಖೆ, ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸೋ ಬದಲು ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನ ಮಾಡಿದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ಸಿದ್ಧತೆಗಳನ್ನ ಆರಂಭ ಮಾಡಿದೆ. ಫೆಬ್ರವರಿ 5ರ ಒಳಗೆ ವಿದ್ಯಾರ್ಥಿಗಳ ಸಂಖ್ಯೆ, ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ, ಮೀಡಿಯಂ ಸೇರಿದಂತೆ ಸಂಪೂರ್ಣ ಮಾಹಿತಿಗಳನ್ನ ಸ್ಯಾಟ್ಸ್( ಸ್ಟೂಡೆಂಟ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದ ಮೂಲಕ ಅಪ್ ಲೋಡ್ ಮಾಡಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಮಾಹಿತಿ ಲಭ್ಯವಾದ ಬಳಿಕ ಪ್ರಶ್ನೆ ಪತ್ರಿಕೆ ಮುದ್ರಣ ಕೆಲಸ ಪ್ರಾರಂಭವಾಗಲಿದೆ.

ಪ್ರಶ್ನೆ ಪತ್ರಿಕೆ ಮಾದರಿಯನ್ನ ಶಿಕ್ಷಣ ಇಲಾಖೆ ಇನ್ನೂ ತೀರ್ಮಾನ ಮಾಡಿಲ್ಲ. ಮಕ್ಕಳ ಮಾಹಿತಿ ಬಂದ ಬಳಿಕ ಪ್ರಶ್ನೆ ಪತ್ರಿಕೆ ಮಾದರಿ ಇಲಾಖೆ ತೀರ್ಮಾನ ಮಾಡಲಿದೆ. ಪ್ರತಿಯೊಬ್ಬ 7 ನೇ ತರಗತಿ ವಿದ್ಯಾರ್ಥಿ ಮೌಲ್ಯಾಂಕನ ಪರೀಕ್ಷೆ ಬರೆಯೋದು ಕಡ್ಡಾಯ. ಒಂದು ವೇಳೆ ವಿದ್ಯಾರ್ಥಿಗಳ ಮಾಹಿತಿ ತಪ್ಪಿ ಹೋದರೆ ಅದಕ್ಕೆ ಶಾಲೆ ಮತ್ತು ಶಿಕ್ಷಕರೇ ಹೊಣೆಯಾಗಲಿದ್ದಾರೆ ಅಂತ ಇಲಾಖೆ ಎಚ್ಚರಿಕೆ ನೀಡಿದೆ.

ಏನಿದು ಮೌಲ್ಯಾಂಕನ ಪರೀಕ್ಷೆ?:
7 ನೇ ತರಗತಿ ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಗುಣಮಟ್ಟ ಅಳೆದು, ಯಾವ ವಿಷಯದಲ್ಲಿ ವಿದ್ಯಾರ್ಥಿ ವೀಕ್ ಇರುತ್ತಾನೋ ಅ ವಿಷಯದ ಮೇಲೆ ಹೆಚ್ಚು ಗಮನ ಕೊಟ್ಟು ಆತನಿಗೆ ಅಭ್ಯಾಸ ಮಾಡಿಸೋದಾಗಿದೆ. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನ ಫೇಲ್ ಮಾಡೋದಿಲ್ಲ. ಆಯಾ ಶಾಲೆಯಲ್ಲಿ ಈ ಪರೀಕ್ಷೆಗಳು ನಡೆಯುತ್ತೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಾರೆ. ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ತಯಾರು ಮಾಡುತ್ತದೆ. ಯಾವ ವಿಷಯದಲ್ಲಿ ವಿದ್ಯಾರ್ಥಿ ವೀಕ್ ಇರುತ್ತಾನೋ ಅ ವಿಷಯಕ್ಕೆ 8ನೇ ತರಗತಿಯಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಿ ಆತನಿಗೆ ತರಬೇತಿ ಕೊಡುವುದೇ ಈ ಪರೀಕ್ಷೆಯ ಉದ್ದೇಶವಾಗಿದೆ. ಈ ಮೂಲಕ ಗುಣಮಟ್ಟದ ಶಿಕ್ಷಣ ನಿಡೋದು ಈ ಪರೀಕ್ಷೆಯ ಗುರಿಯಾಗಿದೆ.

Comments

Leave a Reply

Your email address will not be published. Required fields are marked *