ಸಂಪನ್ಮೂಲದ ಕೊರತೆಯ ಮಧ್ಯೆ ನಾವು ಫೈಟ್ ಕೊಟ್ಟಿದ್ದೇವೆ: ಖರ್ಗೆ

ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸಂಪನ್ಮೂಲದ ಕೊರತೆ ಇತ್ತು. ಆದರೂ ಕಾಂಗ್ರೆಸ್ ಉತ್ತಮ ಸ್ಪರ್ಧೆ ನೀಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಯಾಣದಲ್ಲಿ ಬಿಜೆಪಿಗೆ ಬಹುಮತ ಇಲ್ಲ. ವಿರೋಧ ಪಕ್ಷಗಳೆಲ್ಲ ಒಂದಾದರೆ ಬಿಜೆಪಿ ವಿರುದ್ಧ ಸರ್ಕಾರ ರಚಿಸಬಹುದು. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಪ್ರಧಾನಿ ಮೋದಿಯವರು ಮಹಾರಾಷ್ಟ್ರದಲ್ಲಿ 50 ರ‍್ಯಾಲಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ನ 12, ಎನ್‍ಸಿಪಿಯ 17 ಶಾಸಕರಿಗೆ ಇಡಿ ಮತ್ತು ಐಟಿ ಎಂದು ಹೆದರಿಸಿ ತಮ್ಮ ಪಕ್ಷಕ್ಕೆ ತೆಗೆದುಕೊಂಡರು. ನಮಗೆ ಸಂಪನ್ಮೂಲಗಳ ಕೊರತೆ ಮಹಾರಾಷ್ಟ್ರದಲ್ಲಿ ಎದುರಾಗಿತ್ತು. ಇದರ ನಡುವೆಯೂ ಕಾಂಗ್ರೆಸ್ ಮತ್ತು ಎನ್‍ಸಿಪಿ ಬಿಜೆಪಿ ವಿರುದ್ಧ ಉತ್ತಮ ಫೈಟ್ ಕೊಟ್ಟಿದೆ. ಜನ ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಮತದಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದರು. ಆದರೂ ಜನ ತಿಳಿದುಕೊಂಡು ಮತ ಹಾಕಿದ್ದಾರೆ. ಇದು ಒಂದು ಒಳ್ಳೆಯ ರಿಸಲ್ಟ್. ಸರ್ಕಾರ ತೊಂದರೆ ಕೊಟ್ಟರೂ ಕೂಡ ಕಾಂಗ್ರೆಸ್ ಜೊತೆ ಜನರು ನಿಂತಿದ್ದಾರೆ. ಮಹಾರಾಷ್ಟ್ರ ಮತ್ತು ಹರ್ಯಾಣದ ಜನತೆಗೆ ಅಭಿನಂದನೆಗಳು. ಮಹಾರಾಷ್ಟ್ರದಲ್ಲಿ ಇನ್ನು ಹೆಚ್ಚು ಸ್ಥಾನ ನಿರೀಕ್ಷೆ ಮಾಡುತ್ತಿದ್ದೇವೆ. ಬಿಜೆಪಿ ಸ್ಥಳೀಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿ ವಿಜೃಂಭಿಸಿ ಮತ ಕೇಳಿತ್ತು. ಈಗ ಅದರ ಫಲಿತಾಂಶ ಹೀಗೆ ಬಂದಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *