ಪ್ರೀತ್ಸಿ ಮದ್ವೆ ಆಗಿದ್ದ ಪತ್ನಿಯ ಅನುಮಾನಕ್ಕೆ ಬೇಸತ್ತು ಕೊಲೆಗೈದ ಕ್ರಿಕೆಟರ್

ಬೆಂಗಳೂರು: ಪ್ರೀತಿಸಿ ಮದುವೆ ಆಗಿದ್ದ ಪತ್ನಿಯನ್ನು ಕೊಲೈಗೈದು, ಪ್ರಕರಣದಿಂದ ಪಾರಾಗಲು ಕಥೆ ಕಟ್ಟಿದ್ದ ಪತಿಯೊಬ್ಬನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ರಾಕೇಶ್ ಗುಪ್ತಾ ಬಂಧಿತ ಆರೋಪಿ. ರಾಧಾ ಕೊಲೆಯಾದ ಪತ್ನಿ. ಇದೇ ತಿಂಗಳ 17ರಂದು ಆರೋಪಿ ಕೊಲೆ ಮಾಡಿದ್ದ. ಆದರೆ ಪತ್ನಿ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದ.

ಆರೋಪಿ ರಾಕೇಶ್ ಗುಪ್ತಾ ಹಾಗೂ ರಾಧಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮೂಲತಃ ಉತ್ತರ ಪ್ರದೇಶದ ಗುಪ್ತಾ ಮದುವೆಯ ಬಳಿಕ ಬೆಂಗಳೂರಿಗೆ ಬಂದು ಕೆಲಸ ಮಾಡಿಕೊಂಡು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪತ್ನಿಯ ಜೊತೆಗೆ ವಾಸವಾಗಿದ್ದ. ಗುಪ್ತಾ ಉತ್ತರ ಕ್ರಿಕೆಟರ್ ಆಗಿದ್ದರಿಂದ ಸ್ಥಳೀಯ ಟೀಮ್‍ಗಳಲ್ಲಿ ಆಟವಾಡಿ ಹಣ ಗಳಿಸುತ್ತಿದ್ದ.

ಕೆಲ ದಿನಗಳ ಹಿಂದೆ ರಾಕೇಶ್‍ಗೆ ಗಾಯವಾಗಿತ್ತು. ಪರಿಣಾಮ ಆತನಿಗೆ ಕ್ರಿಕೆಟ್ ಆಡುವುದಕ್ಕೆ ಆಗುತ್ತಿರಲಿಲ್ಲ. ಇದರಿಂದಾಗಿ ಸಂಪಾದನೆ ನಿಂತು ಹೋಯಿತು. ಆಗ ಸಂಸಾರದಲ್ಲಿ ಗಲಾಟೆ ಆಗಲು ಆರಂಭವಾಗಿತ್ತು. ಪತಿ ಬೇರೋಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನ ಪತ್ನಿ ರಾಧಾಳಿಗೆ ಕಾಡತೊಡಗಿತ್ತು.

ಅಡುಗೆ ವಿಚಾರವಾಗಿ ರಾಧಾ ಹಾಗೂ ರಾಕೇಶ್ ನವೆಂಬರ್ 17ರಂದು ಜಗಳ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಗುಪ್ತಾ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಲಗಿದ್ದ. ಬೆಳಗ್ಗೆ ಎದ್ದು ನೋಡಿದರೆ ಪತ್ನಿ ಶವವಾಗಿ ಬಿದ್ದಿದ್ದಳು. ಆದರೆ ಆರೋಪಿಯು, ಪತ್ನಿ ಮಟ್ಟಿಲಿನಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ನೆರೆಹೊರೆಯವರನ್ನು ನಂಬಿಸಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ರಾಕೇಶ್ ಅದೇ ಕಥೆಯನ್ನು ಹೇಳಿದ್ದ. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಪತ್ನಿ ರಾಧಾ ಫೋನ್ ಪಡೆದು ಕಾಲ್, ಮೆಸೇಜ್ ಚೆಕ್ ಮಾಡಿ ಕಿರಿಕಿರಿ ಕೊಡುತ್ತಿದ್ದಳು. ಅಷ್ಟೇ ಅಲ್ಲದೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದಳು. ಇದರಿಂದಾಗಿ ಮಾನಸಿಕವಾಗಿ ಕುಂದಿದ್ದೆ ಎಂದು ರಾಕೇಶ್ ಬಾಯಿ ಬಿಟ್ಟಿದ್ದಾನೆ. ಕೊಲೆ ಮಾಡಿರುವುದು ಖಚಿತವಾಗುತ್ತಿದ್ದ ಆರೋಪಿ ರಾಖೇಶ್ ಗುಪ್ತಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Comments

Leave a Reply

Your email address will not be published. Required fields are marked *