ಪತ್ನಿಯನ್ನ ಕೊಲೆಗೈದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಭೂಪ ಅರೆಸ್ಟ್

– ತಮ್ಮನಿಗೆ ಸಹಾಯ ಮಾಡಿದ್ದ ಅಣ್ಣ ಕೂಡ ಅಂದರ್

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಪತಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಕಲ್ಲೇಶ್ (31) ಪತ್ನಿಯನ್ನು ಕೊಲೆಗೈದ ಪತಿ. ಕೃತ್ಯಕ್ಕೆ ಕಲ್ಲೇಶ್ ಸಹೋದರ ಕೃಷ್ಣಪ್ಪ (33) ಸಹಾಯ ಮಾಡಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಶಿಲ್ಪಾ (21) ಮೃತ ದುರ್ದೈವಿ. ಇದೇ 12ರಂದು ಘಟನೆ ನಡೆದಿದ್ದು, ಸತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕೊತ್ತನೂರು ವ್ಯಾಪ್ತಿಯ ದುರ್ಗಾ ಲೇಔಟ್‍ನಲ್ಲಿ ಕಲ್ಲೇಶ್, ಶಿಲ್ಪಾ ದಂಪತಿ ವಾಸವಾಗಿದ್ದರು. ಕೆಲಸಕ್ಕೆ ಹೋಗಬೇಡ ಅಂತ ಕಲ್ಲೇಶ್ ಪತ್ನಿ ಶಿಲ್ಪಾಗೆ ಹೇಳಿದ್ದ. ಆದರೆ ಪತಿಯ ಮಾತನ್ನು ಕೇಳದೆ ಶಿಲ್ಪಾ ಕಂಪನಿಯೊಂದಲ್ಲಿ ಕೆಲಸಕ್ಕೆ ಸೇರಿದ್ದು, ಹಣ ಕೊಡದೆ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ವಿಚಾರವಾಗಿ ಕಲ್ಲೇಶ್ ಹಾಗೂ ಶಿಲ್ಪಾ ಮಧ್ಯೆ ಮೂರ್ನಾಲ್ಕು ಬಾರಿ ಗಲಾಟೆ ಆಗಿತ್ತು. ಆದರೆ ಕಲ್ಲೇಶ್ ಆಗಸ್ಟ್ 12ರಂದು ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಅಣ್ಣ ಕೃಷ್ಣಪ್ಪನಿಗೆ ಫೋನ್ ಮಾಡಿ, ಘಟನೆಯನ್ನು ತಿಳಿಸಿದ್ದ. ಇದರಿಂದ ಗಾಬರಿಗೊಂಡ ಕೃಷ್ಣಪ್ಪ ಕಲ್ಲೇಶ್‍ನ ಮನೆಗೆ ದೌಡಾಯಿಸಿದ್ದ. ಈ ವೇಳೆ ಕಲ್ಲೇಶ್ ಅಣ್ಣನ ಮನವೊಲಿಸಿ ಶಿಲ್ಪಾಳ ಮೃತ ದೇಹವನ್ನು ಬೈಕ್‍ನಲ್ಲೇ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಮಣ್ಣು ಮಾಡಿದ್ದ.

ಪತ್ನಿಯ ಮನೆಯವರು ತನ್ನ ಮೇಲೆ ಅನುಮಾನ ವ್ಯಕ್ತಪಡಿಸಬಾರದು ಅಂತ ಪ್ಲ್ಯಾನ್ ಮಾಡಿದ್ದ ಕಲ್ಲೇಶ್ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಕಲ್ಲೇಶ್ ಮೇಲೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಕಲ್ಲೇಶ್ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

Comments

Leave a Reply

Your email address will not be published. Required fields are marked *