ಮೈತ್ರಿಯಿಂದಲೇ ಸೋಲೆಂದ ಕಾಂಗ್ರೆಸ್‍ಗೆ ದೇವೇಗೌಡರ ಗುದ್ದು

ಬೆಂಗಳೂರು: ದೋಸ್ತಿ ನಾಯಕರ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಂಡ ಕಂಡ ಕಡೆಯಲ್ಲೆಲ್ಲಾ ಮೈತ್ರಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಒಕ್ಕಲಿಗರು ಕಾರಣನಾ ಅಂತ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೋಗಿದ್ದೇ ಸೋಲಿಗೆ ಕಾರಣ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗರು ಎಷ್ಟಿದ್ದಾರೆ ಎಂದು ಪ್ರಶ್ನಿಸಿ ಗುಡುಗಿದರು.

ಕೆಲವು ನಾಯಕರು ಇತ್ತೀಚೆಗಷ್ಟೇ ಕಾಂಗ್ರೆಸ್ ಹೈಕಮಾಂಡ್‍ಗೆ ಜೆಡಿಎಸ್ ಸಹವಾಸ ಮಾಡಿ ತಪ್ಪಾಯ್ತು ಅಂತ ಚಾಡಿ ಹೇಳಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ರೀತಿ ಮಾತನಾಡಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ನೋವು ತಂದಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

37 ಸೀಟ್ ಇಟ್ಟುಕೊಂಡು ಸಿಎಂ ಸ್ಥಾನ ಕೊಡಿ ಅಂದ್ರೆ ಯಾವ ಧರ್ಮ ಹೇಳಿ? ಕಾಂಗ್ರೆಸಿಗರೇ ಮುಖ್ಯಮಂತ್ರಿ ಆಗಿ ಅಂತ ಹೇಳಿದ್ದಕ್ಕೆ ನಾವು ಸಿಎಂ ಆಗಿದ್ದೇವೆ ಅಂದಿದ್ದಾರೆ. ನನ್ನ ಮಗ ಹೇಗೋ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸಿಎಂ ಬಗ್ಗೆ ಎಚ್‍ಡಿಡಿ ಪ್ರಶಂಸೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *