ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

ಬೆಂಗಳೂರು: ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ, ವರಿಷ್ಠರ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಅಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ರಾಮನಗರದಲ್ಲಿ ಮಾತನಾಡಿದ್ದ ಪುಟ್ಟಣ್ಣ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ನಡೆ ಗೊತ್ತಿಲ್ಲ. 2-3 ಜನ ಹೊರತುಪಡಿಸಿದರೆ ಉಳಿದೆಲ್ಲ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಜೆಡಿಎಸ್ ಬಿಡಲು ಕಾರಣ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಅದಕ್ಕೂ ಸಮಯ ಬರುತ್ತದೆ ಎಂದಿದ್ದರು.

ದೇವೇಗೌಡರು ಹಿರಿಯರು ಅವರ ಬಗ್ಗೆ ಗೌರವವಿದೆ. ಚಲುವರಾಯಸ್ವಾಮಿ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ. ಅಧಿಕಾರಾವಧಿ ಇರುವುದರಿಂದ ನಾವು ತೀರ್ಮಾನ ತೆಗೆದುಕೊಳ್ಳಲು 2020ರ ವರೆಗೆ ಸಮಯವಿದೆ. ಆದರೆ ಈಗ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆವು. ಹೀಗಾಗಿ ಈಗಲೇ ಬಹುತೇಕ ಎಲ್ಲ ಎಂಎಲ್‌ಸಿಗಳೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಈ ಕುರಿತು ಹೊರಟ್ಟಿಯವರು ಮಾತನಾಡಿದ್ದಾರೆ. ಇಂದು ಚರ್ಚೆ ಮಾಡೋಣ ಎಂದಿದ್ದರು. ನೀವು ತೀರ್ಮಾನ ಮಾಡಿ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

ಹಾಲಿ ಎಂಎಲ್‌ಸಿಗಳು ಒಮ್ಮೆ ತೀರ್ಮಾನ ಮಾಡಿದ್ದಾರೆ ಮತ್ತೊಮ್ಮೆ ಸೇರಲು ನಿರ್ಧರಿಸಿದ್ದಾರೆ. ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನೂ ಅನಿಸುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಹೇಳದೆ ಟಾಂಗ್ ನೀಡಿದ್ದರು.

Comments

Leave a Reply

Your email address will not be published. Required fields are marked *