ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನ ಜೊತೆ ಮಿಡಿಯಲಿ ರಾಮನಾಮ: ಜಗ್ಗೇಶ್

ಬೆಂಗಳೂರು: ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನಜೊತೆ ಮಿಡಿಯಲಿ ರಾಮನಾಮ ಎಂದು ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್ ಅವರು ಮನಮಿಡಿಯುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಸದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಕ್ರಿಯವಾಗಿ ಇರುವ ಜಗ್ಗೇಶ್, ಸಾಮಾಜಿಕ ತೊಂದರೆ, ಅವರ ಅನುಭವ, ಅಭಿಮಾನಿಗಳ ಕುರಿತು ಯಾವಾಗಲೂ ಟ್ವೀಟ್ ಮಾಡುತ್ತಿರುತ್ತಾರೆ. ಅಂತೆಯೇ ಇಂದು ಕೂಡ ವೃದ್ಧೆ ಮತ್ತು ಕೋತಿ ಇರುವ ಫೋಟೋವನ್ನು ಹಂಚಿಕೊಂಡು, ಊರು ಹೋಗೆನ್ನಲು, ಕಾಡು ಬಾ ಎನ್ನಲು ಯಾರು ಬರುವರು ನನ್ನ ಜೊತೆ ಬಂಧುವಾಗಿ ಎಂದು ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ಫೋಟೋ ಜೊತೆ ಟ್ವೀಟ್ ಮಾಡಿರುವ ಅವರು, ಊರು ಹೋಗೆನ್ನಲು ಕಾಡು ಬಾ ಎನ್ನಲು ಯಾರು ಬರುವರು ನನ್ನ ಜೊತೆ ಬಂಧುವಾಗಿ. ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನ ಜೊತೆ ನೀನಿಲ್ಲಿ ಇರುವವರೆಗೆ. ಗುಣಿಸಿ ಬಾಗಿಸಿ ಸರಿ-ತಪ್ಪುಗಳ ದಿಕ್ಕುತಿಳಿಸುವೆ ತಲುಪಲು ಯಾವ ಊರಿಗೆ ಎಂದು. ಅಲ್ಲಿಯವರೆಗು ಹೃದಯ ಶಬ್ದದ ಜೊತೆ ಮಿಡಿಯಲಿ ರಾಮನಾಮ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರವನ್ನು ಮೊದಲು ಜಗ್ಗೇಶ್ ಅವರ ಅಭಿಮಾನಿ ಮಂಜು ಮೈಸೂರು ಅವರು ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ತರಕಾರಿ ಮಾರುವ ಓರ್ವ ಬಡ ವೃದ್ಧೆಯ ಬಳಿ ಆಹಾರಕ್ಕಾಗಿ ಕೋತಿಯೊಂದು ಬಂದಿದೆ. ಈ ಕೋತಿಯನ್ನು ಕಂಡ ವೃದ್ಧೆ ನನ್ನ ಹತ್ತಿರ ನಿನಗೆ ಕೊಡಲು ಏನು ಇಲ್ಲ. ನಾನೇನು ಕೊಡಲಿ ಎಂದು ಹೇಳುತ್ತಿರುವ ಮನಮಿಡಿಯುವ ಮಾತು ಕತೆಯನ್ನು ನಾವು ಫೋಟೋದಲ್ಲಿ ಕಾಣಬಹುದು.

ಟ್ವಿಟ್ಟರ್ ಮೂಲಕವೇ ಕೆಲ ಅಭಿಮಾನಿಗಳಿಗೆ ಸಹಾಯ ಮಾಡುವ ಜಗ್ಗೇಶ್ ಅವರು, ಇತ್ತೀಚೆಗಷ್ಟೇ ಚಿಕ್ಕಮಗಳೂರಿನ ಅವರ ಮಹಿಳೆ ಅಭಿಮಾನಿಯೋರ್ವರಿಗೆ ಸಹಾಯ ಮಾಡಿದ್ದರು. ಜಗ್ಗೇಶ್ ಅವರಿಗೆ ಟ್ವೀಟ್ ಮಾಡಿದ್ದ ಯುವತಿ ನಮ್ಮ ತಂದೆಯನ್ನು ಕರೆದುಕೊಂಡು ಬೆಂಗಳೂರಿನ ಆಸ್ಪತ್ರೆಗೆ ಬಂದಿದ್ದೇವೆ. ನನಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಒಂದು ಐಸಿಯು ಬೆಡ್ ಬೇಕು ಸಿಗುತ್ತಿಲ್ಲ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜಗ್ಗೇಶ್ ಅವರು ನಿಮ್ಹಾನ್ಸ್ ಆಸ್ಪತ್ರೆ ಕೊರೊನಾ ರೋಗಿಗಳಿಗೆ ಸೀಮಿತವಾಗಿದೆ ನಿಮಗೆ ಪರ್ಯಾಯ ಮಾರ್ಗ ಮಾಡಿಕೊಡುವೆ ಎಂದು ತಿಳಿಸಿದ್ದರು.

ಇತ್ತ ನಿಖಿಲ್ ಕುಮಾರಸ್ವಾಮಿ ಮದುವೆಯ ಬಗ್ಗೆಯೂ ಟ್ವೀಟ್ ಮಾಡಿರುವ ಜಗ್ಗೇಶ್, ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ. ತಂದೆ, ತಾಯಿ ತಾತ, ಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದನ್ನು ಪಡೆದ ಅದೃಷ್ಟವಂತ ನಿಖಿಲ್. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಜೋಡಿಗೆ ಶುಭಹಾರೈಕೆ, ನೂರ್ಕಾಲ ಸುಖವಾಗಿ ಬಾಳಿ ಎಂದು ನವಜೋಡಿಗೆ ಹಾರೈಸಿದ್ದಾರೆ.

Comments

Leave a Reply

Your email address will not be published. Required fields are marked *