ಶೀಲ ಶಂಕಿಸಿ 17 ಬಾರಿ ಚಾಕು ಇರಿದ ಪತಿ – ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ ಪತ್ನಿ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಹದಿನೇಳು ಬಾರಿ ಚಾಕು ಇರಿದಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ಇಲ್ಲಿನ ವಿಠ್ಠಲ ನಗರದ ವಾಸಿಯಾದ ಉಮೇಶ್ ಮತ್ತು ಇಂದಿರಾ ದಂಪತಿ ಕಳೆದ ಆರು ವರ್ಷಗಳ ಹಿಂದೆ ಮದುವೆ ಆಗಿದ್ದರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಉಮೇಶ್‍ಗೆ ಮದುವೆ ಆದ ದಿನದಿಂದಲೂ ಪತ್ನಿಯ ಮೇಲೆ ವಿಪರೀತ ಅನುಮಾನವಿತ್ತು.

ಇದೇ ವಿಚಾರಕ್ಕೆ ಆಗಾಗ ಪತಿ, ಪತ್ನಿಯ ನಡುವೆ ಗಲಾಟೆಗಳು ನಡೆಯುತ್ತಿತ್ತು. ಇದಾದ ನಂತರ ಪತ್ನಿಗೆ ಎಲ್ಲೂ ಹೊರಗಡೆ ಹೋಗದಂತೆ ಯಾರೊಂದಿಗೂ ಮಾತಾಡದಂತೆ ಉಮೇಶ್ ಒತ್ತಡ ಹೇರುತ್ತಿದ್ದನಂತೆ. ಈ ನಡುವೆಯೂ ಇಬ್ಬರು ಗಲಾಟೆ ಮಾಡಿಕೊಂಡಾಗ ಸಂಬಂಧಿಕರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡಿದ್ದರು.

ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದ ಉಮೇಶ್ ಮತ್ತು ಇಂದಿರಾ ನಡುವೆ ಇದೇ ವಿಚಾರಕ್ಕೆ ಗಲಾಟೆ ಆಗಿದೆ. ಈ ವೇಳೆ ಪತಿ ಉಮೇಶ್ ಚಾಕುವಿನಿಂದ ಪತ್ನಿಗೆ ಹದಿನೇಳು ಬಾರಿ ಇರಿದು ಸತ್ತಿದ್ದಾಳೆ ಎಂದು ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಪತ್ನಿ ಇಂದಿರಾ ಬದುಕುಳಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು ಗಂಡ ಉಮೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *