ಹಬ್ಬಕ್ಕೆ ತವರು ಮನೆಗೆ ಹೋದ ಪತ್ನಿ-ಪತಿಯಿಂದ ಮಚ್ಚಿನಿಂದ ಹಲ್ಲೆ

ಬೆಂಗಳೂರು: ಪತ್ನಿ ಗಣೇಶ ಹಬ್ಬಕ್ಕೆ ತವರು ಮನೆಗೆ ಹೋದಳು ಎಂಬ ಕಾರಣಕ್ಕೆ ಕೋಪಗೊಂಡ ಗಂಡ ಮಚ್ಚಿನಿಂದ ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಎಂಇಐ ಬಡಾವಣೆಯಲ್ಲಿ ನಡೆದಿದೆ.

ಹಲ್ಲೆ ಮಾಡಿರುವ ಪತಿಯನ್ನು ಲೋಹಿತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲೋಹಿತ್‍ನ ಬಾಮೈದ ಸತೀಶ್ ಹಾಗೂ ಅತ್ತೆ ಪಾರ್ವತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಹಿತ್ 8 ವರ್ಷದ ಹಿಂದೆ ಭಾರತಿ (ಹೆಸರು ಬದಲಿಸಲಾಗಿದೆ) ಅವರನ್ನು ಮದುವೆಯಾಗಿದ್ದ, ಆದರೆ ಅತ್ತೆ ಮನೆಯವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ ಎಂದು ಹೇಳಲಾಗಿದೆ.

ಪತಿ ತವರು ಮನೆಗೆ ಹೋಗುವುದು ಬೇಡ ಎಂದರು ಭಾರತಿ ಹಬ್ಬಕ್ಕೆ ಹೋಗಿದ್ದರು. ಇದರಿಂದ ಕೋಪಗೊಂಡ ಲೋಹಿತ್ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದನು. ಇದನ್ನು ಪ್ರಶ್ನೆ ಮಾಡಲು ಹೋದ ಸತೀಶ್ ಮತ್ತು ಅತ್ತೆ ಪಾರ್ವತಮ್ಮಗೆ ಅಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಲೋಹಿತ್‍ಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *