ಒಲೆ, ಬೆಂಕಿ ಉದಾಹರಣೆ ನೀಡಿ ಸಿದ್ದುಗೆ ಪರೋಕ್ಷ ಗುನ್ನಾ ಕೊಟ್ಟ ಹೆಚ್‌ಡಿಕೆ

ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟ್ವಿಟ್ಟರಿನಲ್ಲಿ ಟಾಂಗ್ ನೀಡಿದ್ದಾರೆ. ಪಕ್ಕದ ಮನೆಯ ಒಲೆ ಆರಿಸಲು ಬರುವ ಮುನ್ನ ಹೊತ್ತಿ ಉರಿಯುತ್ತಿರುವ ತಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಇಂದು ಮಧ್ಯಾಹ್ನ ಒಂದು ಟ್ವೀಟ್ ಮಾಡಿರುವ ಹೆಚ್‌ಡಿಕೆ, ಹೆಸರನ್ನೇ ಉಲ್ಲೇಖಿಸದೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿಯೇ ಕಿಡಿಕಾರಿದ್ದಾರೆ. ಕೆಲವರು ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಕೆಲವರು ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು. ಪಕ್ಕದ ಮನೆಯ ಒಲೆ ಆರಿಸಲು ಬರುವ ಮುನ್ನ ಹೊತ್ತಿ ಉರಿಯುತ್ತಿರುವ ತಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಸಾಫ್ಟ್ ಆಗಿ ಮಾತನಾಡಿದ್ದ ಹೆಚ್‌ಡಿಕೆ, ರಾಜ್ಯದಲ್ಲಿ ನೆರೆ ಬಂದಿದೆ ಜನರು ಮನೆಗಳನ್ನು ಕಳೆದುಕೊಂಡು ಕಷ್ಟಪಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ನಾವು ಚುನಾವಣೆಗೆ ಹೋದರೆ ಸರ್ಕಾರಕ್ಕೆ ನಷ್ಟವಾಗುತ್ತದೆ. ಚುನಾವಣೆಗೆ ಅಪಾರ ಪ್ರಮಾಣದ ಹಣ ಖರ್ಚಾಗುತ್ತದೆ. ಅದ್ದರಿಂದ ನನ್ನ ಮೈತ್ರಿ ಸರ್ಕಾರವನ್ನು ಕೆಡವಿದರು ಎಂದು ನಾನು ದ್ವೇಷದಿಂದ ಬಿಜೆಪಿ ಸರ್ಕಾರವನ್ನು ಬೀಳಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು.

ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ದೇವೇಗೌಡರು ತುಂಬಾ ಸುಧಾರಿಸಿದ್ದಾರೆ. ಹೆಚ್‌ಡಿಕೆ ರಾಜ್ಯದ ಜನರ ಪರಿಸ್ಥಿತಿಯನ್ನು ಮನದಲ್ಲಿ ಇಟ್ಟುಕೊಂಡು ಹೇಳಿರುವ ಒಳ್ಳೆಯ ಮಾತನ್ನು ಸ್ವಾಗತ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *