‘ನಿನ್ನನ್ನು ಗುಂಡಿಕ್ಕಿ ಕೊಲ್ತೀನಿ’ – ಮಾಜಿ ಶಾಸಕ ಅನಿಲ್ ಲಾಡ್‍ಗೆ ರವಿ ಪೂಜಾರಿ ಬೆದರಿಕೆ

ಬೆಂಗಳೂರು: ಮಾಜಿ ಶಾಸಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ಆಗಿರುವ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಸಂದೇಶ ಬಂದಿದ್ದು, ನಿನ್ನನ್ನು ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ.

ಡಿಸೆಂಬರ್ 5 ರಂದು ಮಾಜಿ ಶಾಸಕರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿರುವ ಭೂಗತ ಪಾತಕಿ ಹಣಕಾಸು ವ್ಯವಹಾರದ ಸಂಬಂಧ ಬೆದರಿಕೆ ಹಾಕಿದ್ದಾನೆ. ಅನಿಲ್ ಲಾಡ್ ವ್ಯವಹಾರಿಕ ಸಂಬಂಧದ ಹಿನ್ನೆಲೆಯಲ್ಲಿ ನಗರದ ಶಿವಕುಮಾರ್ ಎಂಬವರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಈಗ ಜೀವ ಬೆದರಿಕೆ ಹಾಕಿರುವುದರಿಂದ ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎನ್ನುವುದರ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಗಣಿ ಉದ್ಯಮಿ ಆಗಿರುವ ಅನಿಲ್ ಲಾಡ್ 15 ಕೋಟಿ ರೂ. ಹಣವನ್ನು ಬೆಂಗಳೂರು ಮೂಲದ ಶಿವಕುಮಾರ್‍ಗೆ ನೀಡಿದ್ದು, ಈ ಹಣ ವಾಪಸ್ ಕೇಳಿದ್ದರು. ಆದರೆ ಹಣ ಹಿಂದಿರುಗಿಸುವ ಬದಲಾಗಿ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಅನಿಲ್ ಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ವಿದೇಶದಲ್ಲಿ ಅಡಗಿ ಕುಳಿತಿರುವ ರವಿ ಪೂಜಾರಿ ಡಿಸೆಂಬರ್ 5ರಂದು ಜೀವ ಬೆದರಿಕೆ ಹಾಕಿದ್ದಾನೆ.

ರವಿ ಪೂಜಾರಿ ಹೆಸರಿನಲ್ಲಿ ಅಂತರಾಷ್ಟ್ರೀಯ ನಂಬರ್‍ನಿಂದ ಬಂದಿರುವ ಮೆಸೇಜ್‍ನಲ್ಲಿ ಶಿವಕುಮಾರ್ ನೀಡಬೇಕಿದ್ದ ಹಣ ಮರೆತು ಬಿಡಿ. ಇಲ್ಲವಾದರೆ ನಿನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ. ಸದ್ಯ ಅನಿಲ್ ಲಾಡ್ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ತನಿಖೆಯನ್ನು ಮಾಡುವಂತೆ ಮನವಿ ಮಾಡಿದ್ದಾರೆ.

ಗೃಹ ಸಚಿವರು ಪೊಲೀಸ್ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆದರಿಕೆ ಸಂದೇಶ ಬಂದಿರುವ ನಂಬರ್ ಅಂತರಾರಾಷ್ಟ್ರೀಯ ಸಂಖ್ಯೆ ಆಗಿರುವುದಿರಿಂದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣದಲ್ಲಿ ರವಿಪೂಜಾರಿ ಮಧ್ಯಪ್ರವೇಶ ಮಾಡಿದ್ದು ಯಾಕೆ? ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಅನಿಲ್ ಲಾಡ್ ಹಾಗೂ ಶಿವಕುಮಾರ್ ನಡುವೆ ಯಾವ ರೀತಿಯ ವ್ಯವಹಾರ ನಡೆದಿದೆ ಎಬುವುದರ ಬಗ್ಗೆಯೂ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *