2,500 ರೂಪಾಯಿಗಾಗಿ ಸ್ನೇಹಿತನ ಎದೆಗೆ ಚಾಕು ಇರಿದ ಯುವಕರು

ಬೆಂಗಳೂರು: 2,500 ರೂಪಾಯಿಗಾಗಿ ಕೆಲ ಯುವಕರು ಸ್ನೇಹಿತನ ಎದೆಗೆ ಚಾಕು ಇರಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ದಿಲೀಪ್ ಕುಮಾರ್ (21) ಚಾಕು ಇರಿತಕ್ಕೊಳಗಾದ ಯುವಕ. ಚೇತನ್ ಅಂಡ್ ಟೀಂ ಹಲ್ಲೆ ಮಾಡಿದ ಯುವಕರು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅದೃಷ್ಟವಶಾತ್ ದಿಲೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿಗಳಿಗೆ ಸಂಬಂಧಿಸಿದ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿಲೀಪ್ ಕುಮಾರ್, ಚೇತನ್ ಸೇರಿದಂತೆ ಕೆಲ ಯುವಕರು ಸ್ವಿಫ್ಟ್ ಕಾರಿನಲ್ಲಿ ಗೋರಗುಂಟೇಪಾಳ್ಯದಿಂದ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ 2,500 ರೂಪಾಯಿಗೆ ಜಗಳವಾಡಿಕೊಂಡಿದ್ದರು. ಈ ವೇಳೆ ಚೇತನ್ ತನ್ನ ಟೀಂ ಜೊತೆಗೆ ಸೇರಿ ದಿಲೀಪ್ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಚಾಕು ಇರಿದು ಸ್ಥಳದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್‍ನನ್ನು ಕೆಲ ಯುವಕರು ತಕ್ಷಣವೇ ಡಾಬಸ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *