ತಮಿಳುನಾಡಿನ ರೆಸಾರ್ಟ್‌ನಲ್ಲಿ ಬೆಂಗ್ಳೂರು ಕಾರ್ಪೋರೇಟರ್ ಅರೆಸ್ಟ್

ಬೆಂಗಳೂರು: ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಎ. ನಾರಾಯಣಪುರದ ಕಾರ್ಪೋರೇಟರ್ ವಿ. ಸುರೇಶ್ ನನ್ನು ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂ ಬಳಿಯ ಎರ್ರಾಕಾಡ್ ರೆಸಾರ್ಟ್ ನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಪೋರೇಟರ್ ಸುರೇಶ್, ಮೃತ ವಕೀಲೆ ಧರಣಿ ಕುಟುಂಬಕ್ಕೆ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದನು. ಕಳೆದ ಮೂರು ದಿನಗಳಿಂದ ಈ ಕೇಸಿಗೆ ಸಂಬಂಧಿಸಿದಂತೆ ವಿ.ಸುರೇಶ್‍ಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದರು. ಆದರೆ ಪೊಲೀಸರ ಕಣ್ಣಿಗೆ ಕಾಣದೆ ಆರೋಪಿ ತಮಿಳುನಾಡಿನ ಸೇಲಂ ಬಳಿಯಿರುವ ಎರ್ರಾಕಾಡ್ ಎಂಬ ರೆಸಾರ್ಟ್ ನಲ್ಲಿ ಅಡಗಿ ಕೂತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.

ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆಗೆಂದು ಪೊಲೀಸರು ಸುರೇಶ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ರಾತ್ರಿ ಸುಮಾರು 1.00 ಗಂಟೆಗೆ ಕೊರಮಂಗಲದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರು ಪಡಿಸಿದ್ದರು. ಸದ್ಯಕ್ಕೆ ಆರೋಪಿಗೆ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಮನೆಯೊಂದರಲ್ಲಿ ವಕೀಲೆ ಧರಣಿ ನೇಣು ಬಿಗಿದುಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕೇಸಿಗೆ ಸಂಬಂಧಿಸಿದಂತೆ ಈವರೆಗೂ 11 ಜನ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *