12 ದಿನವಾದ್ರೂ ಅರೆಸ್ಟ್ ಆಗಿಲ್ಲ ಶಾಸಕ ರೌಡಿ ಗಣೇಶ್ – ಇತ್ತ ಆನಂದ್ ಸಿಂಗ್ ಸಂಧಾನಕ್ಕೆ ಜಮೀರ್ ಸರ್ವಯತ್ನ

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ನಾಪತ್ತೆಯಾಗಿರುವ ಕಂಪ್ಲಿ ಶಾಸಕ ಗಣೇಶ್ ಅವರು 12 ದಿನವಾದ್ರೂ ಪತ್ತೆಯಾಗಿಲ್ಲ. ಹೀಗಾಗಿ ಕರ್ನಾಟಕ, ಗೋವಾ ಬಿಟ್ಟು ಈಗ ಪಕ್ಕದ ಹೈದ್ರಾಬಾದ್‍ಗೆ ಹೋಗಿ ಖಾಕಿಗಳ ಹುಡುಕಾಟ ಶುರು ಮಾಡಿದ್ದಾರೆ.

ಎಸ್‍ಪಿ, ಡಿವೈಎಸ್‍ಪಿ ನೇತೃತ್ವದ ತಂಡದಲ್ಲಿ ಹೈದ್ರಾಬಾದ್‍ನಲ್ಲಿ ಹುಡುಕಾಡುತ್ತಿದ್ದು, `ರೌಡಿ ಶೀಟರ್’ ಆಗಿದ್ದ ಓರ್ವ ಶಾಸಕನ ಬಂಧನಕ್ಕೆ ಪೊಲೀಸರಿಗೆ ಇಷ್ಟೊಂದು ಕಷ್ಟನಾ ಅನ್ನೋ ಪ್ರಶ್ನೆ ಮೂಡಿದೆ.

ಇತ್ತ `ಬಾಟ್ಲಿ’ ಬಾಯ್ಸ್ ನಡುವೆ ಸಂಧಾನಕ್ಕೆ ಸಚಿವ ಜಮೀರ್ ಅಹ್ಮದ್ ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ದಿನ ನಿತ್ಯ ಆಪೋಲೋ ಆಸ್ಪತ್ರೆಗೆ ಸಚಿವರು ತೆರಳಿ ಶಾಸಕ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಹೇಗಾದ್ರೂ `ರೌಡಿ ಎಂಎಲ್‍ಎ’ ಗಣೇಶ್ ಬಚಾವ್ ಮಾಡಲು ಆಹಾರ ಸಚಿವರು ಹರಸಾಹಸ ಪಡುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ನಡೆದದ್ದು ನಡೆದು ಹೋಗಿದೆ. ಕುಳಿತುಕೊಂಡು ಮಾತಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ. ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್ ಆದ್ರೆ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ಜಮೀರ್ ಸಂಧಾನಕ್ಕೆ ಮುಂದಾದ್ರೆ ಶಾಸಕ ಆನಂದ್ ಸಿಂಗ್ ಮಾತ್ರ ಏನೂ ಹೇಳದೇ ಸುಮ್ಮನಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆನಂದ್ ಸಿಂಗ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *