ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

– ಪತಿ, ಅತ್ತೆ ವಿರುದ್ಧ ಕೊಲೆ ಆರೋಪ

ಬೆಂಗಳೂರು: ನವ ವಿವಾಹಿತೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಬ್ಯಾಡರಹಳ್ಳಿಯ ನಿವಾಸಿ ವನಿತಾ (25) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವ ವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ವನಿತಾ ಅವರನ್ನು ಟೆಕ್ಕಿ ಕಿರಣ್ ಕುಮಾರ್ ಮದುವೆಯಾಗಿದ್ದ. ಆದರೆ ಮದುವೆಯಾದ ದಿನದಿಂದ ವರದಕ್ಷಿಣೆ ಹಣಕ್ಕಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಕಿರಣ್ ಕುಮಾರ್ ಪ್ರತಿದಿನವೂ ಪತ್ನಿ ವನಿತಾ ಅವರಿಗೆ ಕಿರುಕುಳ ಕೊಡುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ವನಿತಾ ಮೂರು ಬಾರಿ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ದರು. ಆದರೂ ಕಿರಣ್ ಕುಮಾರ್ ತನ್ನ ವರ್ತನೆ ನಿಲ್ಲಿಸಿರಲಿಲ್ಲ. ಇಂದು ವಿಕೃತಿ ಮೆರೆದ ಪತಿ ಹಾಗೂ ಅತ್ತೆ ವನಿತಾಳನ್ನು ಹೊಡೆದು ನೇಣು ಹಾಕಿದ್ದಾರೆ ಎಂದು ವನಿತಾ ಸಂಬಂಧಿಕರು ದೂರಿದ್ದಾರೆ.

ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ವನಿತಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *