ಬೆಳ್ಳಂಬೆಳಗ್ಗೆ ಎಣ್ಣೆಗಾಗಿ ಕ್ಯೂ – ಬಾಕ್ಸ್‌ನಲ್ಲಿ ಚಪ್ಪಲಿ ಇಟ್ಟು ರಿಸರ್ವ್

– ಮಂಡ್ಯದಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ

ಬೆಂಗಳೂರು/ಮಂಡ್ಯ: ಇಂದಿನಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಾಗಿಲು ತೆರೆಯುವ ಮುನ್ನವೇ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದಾರೆ. ಅಲ್ಲದೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ ಇಟ್ಟು ಜಾಗವನ್ನು ರಿಸರ್ವ್ ಮಾಡಿದ್ದಾರೆ.

ಬೆಂಗಳೂರು ಹೊರವಲಯ ಬಾಗಲಗುಂಟೆಯ ಎಂಆರ್‌ಪಿ ಶಾಪ್ ಮುಂದೆ ಮದ್ಯಪ್ರಿಯರು ಬೆಳ್ಳಂಬೆಳಗ್ಗೆ ಕ್ಯೂ ನಿಂತಿದ್ದಾರೆ. ಮಧ್ಯದಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ, ಬ್ಯಾಗ್, ಇಟ್ಟಿಗೆ, ಮುಂತಾದ ವಸ್ತುವಿಟ್ಟು ಮದ್ಯಪ್ರಿಯರು ಕ್ಯೂ ನಿಲ್ಲುವ ಸ್ಥಳವನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದಾರೆ.

ಇತ್ತ ಮಂಡ್ಯ ನಗರದ ಮಾರ್ತಾಂಡ ವೈನ್ಸ್ ಅಂಗಡಿ ಮುಂದೆ ಬೆಳ್ಳಂಬೆಳಗ್ಗೆ ಮದ್ಯ ವ್ಯಸನಿಗಳು ಕ್ಯೂನಲ್ಲಿ ನಿಂತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೇ ಹತಾಶರಾಗಿದ್ದ ಎಣ್ಣೆಪ್ರಿಯರ ಮೊಗದಲ್ಲಿ ಇಂದು ನಗು ಮೂಡಿದೆ. ಮದ್ಯ ಖರೀದಿಗೆ ಜನರು ಎಷ್ಟು ಹಾತೊರೆಯುತ್ತಿದ್ದಾರೆ ಎಂದರೆ ಅಂಗಡಿ ತೆರೆಯುವ ಮುನ್ನವೇ ಅಲ್ಲಿ ಸಾಮಾಜಿಕ ಅಂತರಕ್ಕಾಗಿ ಹಾಕಲಾಗಿರೋ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟು ಕುಡುಕರು ಠಿಕಾಣಿ ಹೂಡಿದ್ದಾರೆ. ಅಲ್ಲದೆ ಎಣ್ಣೆ ಸಿಗುತ್ತಿರುವ ಖುಷಿಗೆ ಮದ್ಯದಂಗಡಿ ಮುಂದೆ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕೂಡ ಮದ್ಯ ಖರೀದಿ ಮಾಡಲು ಕುಡುಕರು ಶಿಸ್ತಾಗಿ ಕ್ಯೂನಲ್ಲಿ ನಿಂತಿದ್ದಾರೆ. ಹೊಸ ಬಸ್ ನಿಲ್ದಾಣ ಬಳಿ ಇರುವ ದಾರುವಾಲಾ ಮದ್ಯದಂಗಡಿ ಮುಂದೆ ಎಣ್ಣೆ ಖರೀದಿ ಮಾಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನಿಂದ ಮದ್ಯಪ್ರಿಯರು ಸರತಿ ಸಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಂತೂ ಮದ್ಯಪ್ರಿಯನೋರ್ವ ಎಣ್ಣೆ ಸಿಗುತ್ತಿರುವ ಖುಷಿಗೆ ಮದ್ಯದಂಗಡಿಗೆ ನಮಸ್ಕಾರ ಮಾಡಿ ಖುಷಿಪಟ್ಟಿದ್ದಾನೆ. ನಗರದ ಎಂಎಸ್‍ಐಎಲ್ ಮದ್ಯದಂಗಡಿ ಬಾಗಿಲು ತೆರೆಯುವ ಮುನ್ನವೇ ಮದ್ಯ ಖರೀದಿಗೆ ಜನರು ಬಂದು ನಿಂತಿದ್ದಾರೆ.

Comments

Leave a Reply

Your email address will not be published. Required fields are marked *