ಭೈರತಿ ಸುರೇಶ್ ಹತ್ಯೆ ಯತ್ನ – ವಿಚಾರಣೆ ವೇಳೆ ಹುಚ್ಚನಂತೆ ಹೇಳಿಕೆ ಕೊಟ್ಟ ಆರೋಪಿ

-ನನ್ನ ಮಗ ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ: ಆರೋಪಿ ತಾಯಿ

ಬೆಂಗಳೂರು: ಶಾಸಕ ಭೈರತಿ ಸುರೇಶ್ ಅವರನ್ನು ಇಂದು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಶಿವು ಹುಚ್ಚನಂತೆ ಹೇಳಿಕೆಯನ್ನು ನೀಡಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಶಾಸಕ ಭೈರತಿ ಸುರೇಶ್ ಅವರ ಕೊಲೆಗೆ ಯತ್ನಿಸಿದ್ದ ಆರೋಪಿ ಶಿವು ಅಲಿಯಾಸ್ ಶಿವಕುಮಾರ್‍ನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಸುರೇಶ್ ಅವರಿಗೆ ಚಾಕು ಹಾಕಲು ಹೋಗಿದ್ಯಾಕೆ ಎಂದು ಪ್ರಶ್ನಿಸಿದರೆ ಅಯ್ಯೋ ದೇವರೆ ನಾನಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾನೆ ಮತ್ತು ಚಾಕು ಬಿದ್ದಿತ್ತು ಎತ್ತಿಕೊಂಡೆ ನನಗೆ ಅಷ್ಟೇ ನೆನಪಿರುವುದು ಎಂದು ಹೇಳಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಆರೋಪಿ ತಾಯಿ ಕಮಲಮ್ಮ ನನ್ನ ಮಗ ಚೆನ್ನಾಗಿಯೇ ಇದ್ದ. ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ. ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ಮೊಮ್ಮಗ ಬಂದು ಹೇಳಿದ್ಮೇಲೆ ಗೊತ್ತಾಯಿತು. ಒಂದು ವರ್ಷದ ಹಿಂದೆ ರೋಡ್ ನಲ್ಲಿ ಗಲಾಟೆ ಮಾಡಿದ್ದ. ಅಕ್ಕ ಪಕ್ಕದ ಮನೆಯ ಗೇಟ್ ನೆಲ್ಲ ಹೊಡೆದು ಹಾಕಿದ್ದ. ಬೆತ್ತಲೆಯಾಗಿ ಓಡಾಡಿದ್ದ. ಆದ್ದರಿಂದ ಅವನನ್ನು ನಿಮ್ಹಾನ್ಸ್ ಗೆ ಸೇರಿಸಿದ್ದೆವು ಎಂದು ಹೇಳಿದ್ದಾರೆ.

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದ ಮೇಲೆ ಸರಿಯಾಗಿದ್ದ. ಆದರೆ ಕಳೆದ ಕೆಲ ದಿನಗಳ ಹಿಂದೆ ಮೂರ್ಛೆ ರೋಗ ಕಾಣಿಸಿಕೊಂಡಿತ್ತು. ಅಂದಿನಿಂದ ಹೀಗೆ ಹುಚ್ಚನಂತೆ ಆಡುತ್ತಿದ್ದಾನೆ. ಇವತ್ತು ಭೈರತಿ ಸುರೇಶ್ ಅವರಿಗೆ ಚಾಕು ಹಾಕಲು ಹೋಗಿದ್ದ ಎಂದು ಕೇಳಿ ಅಘಾತವಾಗಿದೆ ಎಂದು ಶಿವು ತಾಯಿ ಕಮಲಮ್ಮ ಹೇಳಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಭೈರತಿ ಸುರೇಶ್, ಶಿವು ಮೊದಲು ನನ್ನ ಕಾರಿಗೆ ಗುದ್ದಿ ಮುಂದಕ್ಕೆ ಹೋದನು. ಮತ್ತೆ ವಾಪಸ್ ಬಂದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಸಹಾಯದಿಂದ ಪಾರಾಗಿದ್ದೇನೆ ಎಂದು ಹೇಳಿದ್ದರು.

ಶಿವು ತಾಯಿ ನಮ್ಮ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವನ ಮನೆಯವರೆಲ್ಲರೂ ಒಳ್ಳೆಯವರು. ಈತ ಮಾತ್ರ ಸ್ವಲ್ಪ ಪೋಲಿಯಾಗಿದ್ದನು. ಶಿವು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಯಾಕೆ ಹೀಗೆ ಮಾಡಿದನೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *