ಖಜಾನೆ ಖಾಲಿ ಎಂದವರಿಗೆ ಉತ್ತರ ಕೊಟ್ಟ ಸಿಎಂ ಬಿಎಸ್‍ವೈ

ಬೆಂಗಳೂರು: ರಾಜ್ಯದ ಬೊಕ್ಕಸ ಖಾಲಿ ಇದೆ. ಅಭಿವೃದ್ಧಿ ಕೆಲಸಗಳು ನಡಿಯುತ್ತಿಲ್ಲ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ತೆರಿಗೆ ಸಂಗ್ರಹ ಸರಿಯಾಗಿ ಆಗ್ತಿಲ್ಲ. ಬೊಕ್ಕಸ ಖಾಲಿಯಾಗಿದೆ ಅಂತ ಸಿಎಂಗೆ ಪದೇ ಪದೇ ಟೀಕೆ ಮಾಡ್ತಿರೋ ವಿಪಕ್ಷಗಳಿಗೆ ಯಡಿಯೂರಪ್ಪ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಕೆಲ ದಿನಗಳಿಂದ ಬಿಡುಗಡೆಗೊಳ್ಳದೆ ಸ್ಥಗಿತಗೊಂಡಿದ್ದ ಶಿಕ್ಷಣ ಇಲಾಖೆ ಶಿಕ್ಷಕರ ವೇತನದ ಹಣ ಬಿಡುಗಡೆ ಮಾಡಿದ್ದು, ವಿಪಕ್ಷಗಳು ಬಾಯಿ ಮುಚ್ಚುವಂತೆ ಮಾಡಿದ್ದಾರೆ.

ಕೇವಲ ಎರಡು ದಿನಗಳ ಅಂತರದಲ್ಲಿ ಶಿಕ್ಷಣ ಇಲಾಖೆಗೆ ಬರೋಬ್ಬರಿ 556 ಕೋಟಿ ರಿಲೀಸ್ ಮಾಡಿ ಬೊಕ್ಕಸ ಬರಿದಾಗಿಲ್ಲ ಅಂತ ಸಂದೇಶ ಕೊಟ್ಟಿದ್ದಾರೆ. ಜನವರಿ 23 ರಂದು ಎಸ್.ಎಸ್.ಎ ಮತ್ತು ಆರ್.ಎಂ.ಎಸ್.ಎ ಶಿಕ್ಷಕರ ವೇತನಕ್ಕಾಗಿ 370.47 ಕೋಟಿ ಬಿಡುಗಡೆ ಮಾಡಿದ್ರು. ಅದಾದ ಎರಡೇ ದಿನಕ್ಕೆ ಅಂದರೆ ಜನವರಿ 25 ರಂದು ಅತಿಥಿ ಶಿಕ್ಷಕರ ವೇತನಕ್ಕಾಗಿ 186 ಕೋಟಿ ಬಿಡುಗಡೆ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಮುಂದಿನ ಮಾರ್ಚ್ ಒಳಗೆ ಗುರಿ ಇಟ್ಟುಕೊಂಡಷ್ಟು ತೆರಿಗೆ ಸಂಗ್ರಹ ಮಾಡೋ ವಿಶ್ವಾಸದಲ್ಲಿ ಇದ್ದಾರೆ. ಹೀಗಾಗಿ ಬಜೆಟ್ ನಲ್ಲಿ ಅತ್ಯುತ್ತಮ ಯೋಜನೆಗಳನ್ನು ತರೋ ಪ್ಲಾನ್ ಮಾಡ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಯಡಿಯೂರಪ್ಪ ರೈತರಿಗಾಗಿ ಸಾಲ ತಂದಾದ್ರು ಅಭಿವೃದ್ಧಿ ಕೆಲಸ ಮಾಡ್ತೀನಿ ಅಂತ ಹೇಳ್ತಿದ್ದಾರೆ.

ವಿಶೇಷ ಅಂದ್ರೆ ಎರಡು ದಿನದ ಅಂತರದಲ್ಲಿ 556 ಕೋಟಿ ರಿಲೀಸ್ ಮಾಡಿರೋ ಸಿಎಂ ಟೀಕೆ ಮಾಡೋ ವಿಪಕ್ಷಗಳ ಬಾಯಿಗೆ ಬೀಗ ಹಾಕಿದ್ದಾರೆ. ಅಷ್ಟೆ ಅಲ್ಲ ಬೊಕ್ಕಸ ಖಾಲಿ ಅಂತಿರೋ ವಿಪಕ್ಷಗಳಿಗೆ ಬಜೆಟ್ ನಲ್ಲಿ ಉತ್ತರ ಕೊಡ್ತೀನಿ ಅಂತ ಸವಾಲ್ ಕೂಡ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *