ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ ಡಿಸಿಎಂಗಳು ಬೇಕಾ, ಬೇಡ್ವಾ?- ರಹಸ್ಯ ಸಹಿ ಸಂಗ್ರಹ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂಗಳು ಇರ್ತಾರಾ ಅನ್ನೋ ಪ್ರಶ್ನೆಯೊಂದು ಎದುರಾಗಿದೆ.

ಸಂಪುಟ ವಿಸ್ತರಣೆಯಾದರೆ ಡಿಸಿಎಂಗಳ ಸಂಖ್ಯೆ ಎಷ್ಟಿರುತ್ತೆ ಎಂಬ ಪ್ರಶ್ನೆ ರಾಜ್ಯ ಬಿಜೆಪಿ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ಡಿಸಿಎಂಗಳ ವಿರುದ್ಧ ಬಿಜೆಪಿ ಆಂತರಿಕ ವಲಯದಲ್ಲಿ ಬಣ ಕಾದಾಟ ಜೋರಾಗುತ್ತಿದೆ. ಬಣ ಗುದ್ದಾಟದ ಫಲವೇ ರಹಸ್ಯ ಸಹಿ ಸಂಗ್ರಹವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಬೇಡ ಬೇಡ ಡಿಸಿಎಂ ಬೇಡ ಅಂತ ಬಿಎಸ್‍ವೈ ಆಪ್ತ ಶಾಸಕರೇ ಧ್ವನಿ ಎತ್ತಿದರು. ಬಹಿರಂಗವಾಗಿಯೇ ಡಿಸಿಎಂ ಬೇಕು ಬೇಡಗಳ ಬಗ್ಗೆ ಚರ್ಚೆ ಶುರು ಮಾಡಿದರು. ಅದರಲ್ಲೂ ಯಡಿಯೂರಪ್ಪ ಆಪ್ತ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿ ಮಾತಾಡಿದರು. ಅಷ್ಟೇ ಅಲ್ಲ ಡಿಸಿಎಂ ಅವಶ್ಯಕತೆ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಮನವಿ ಕೂಡ ಸಲ್ಲಿಸಿದರು. ಆದರೆ ಇದೀಗ ಡಿಸಿಎಂಗಳ ಅಗತ್ಯತೆ ಇದೆಯೋ..? ಇಲ್ಲವೋ ಎಂಬುದರ ಬಗ್ಗೆ ಸಹಿ ಸಂಗ್ರಹ ಮೇಲಾಟ ನಡೆಯುತ್ತಿದೆ ಎನ್ನಲಾಗಿದೆ.

ಸಿಎಂ ಯಡಿಯೂರಪ್ಪ ಆಪ್ತ ಶಾಸಕರ ಗುಂಪಿನಿಂದ ರಹಸ್ಯ ಸಹಿ ಸಂಗ್ರಹ ಶುರುವಾಗಿದೆ. ಡಿಸಿಎಂಗಳ ಅಗತ್ಯತೆ ಇಲ್ಲ ಎಂದು ಸಹಿ ಸಂಗ್ರಹ ಶುರು ಮಾಡಿರುವ ಬಿಜೆಪಿ ಒಂದು ಟೀಂ, ಸಹಿ ಸಂಗ್ರಹಿಸಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಳುಹಿಸಲು ಪ್ಲಾನ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಕಳುಹಿಸಲು ತಂತ್ರ ರೂಪಿಸಿದ್ದಾರೆ.

ಹಾಗಾದರೆ ಯಡಿಯೂರಪ್ಪ ಆಪ್ತ ಶಾಸಕರ ಟೀಂ ತಂತ್ರಕ್ಕೆ ಹೈಕಮಾಂಡ್ ಮಣೆ ಹಾಕುತ್ತಾ?, ಇರುವ ಡಿಸಿಎಂಗಳನ್ನ ರದ್ದು ಮಾಡುತ್ತಾ?, ಇಲ್ಲ ಇನ್ನೊಂದು ಡಿಸಿಎಂ ಸೃಷ್ಟಿಸುತ್ತಾ? ಅನ್ನೋ ಕುತೂಹಲ ರಾಜ್ಯ ಬಿಜೆಪಿಯಲ್ಲಿ ತೀವ್ರವಾಗಿದೆ.

ಒಂದು ವೇಳೆ ಡಿಸಿಎಂ ಬೇಡ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದರೆ ಮೂವರು ಡಿಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆ. ಡಿಸಿಎಂ ಬೇಕು ಅಂತ ಹೈಕಮಾಂಡ್ ಉಳಿಸಿಕೊಂಡರೆ ಡಿಸಿಎಂ ಸ್ಥಾನ 4ಕ್ಕೆ ಹೆಚ್ಚಾದ್ರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಆಗ ಒಂದು ವೇಳೆ 4ನೇ ಡಿಸಿಎಂ ಸೃಷ್ಟಿಯಾದರೆ ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ದೊಡ್ಡ ಮಟ್ಟದ ಕಾದಾಟವಂತೂ ನಡೆಯದೇ ಇರದು.

Comments

Leave a Reply

Your email address will not be published. Required fields are marked *