ಬೆಂಗಳೂರು: ಮಹಾನಗರ ಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ತಗುಲಿ ಬಾಲಕ ಆಸ್ಪತ್ರೆ ಸೇರಿದ್ದ ಘಟನೆಯನ್ನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಸಮರ್ಥಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ. ಕಂಬದಿಂದ ವೈಯರ್ ಕಟ್ಟಾಗಿ ಬಿದ್ದಿದೆ. ಬಾಲಕ ಆಟವಾಡುತ್ತಿರುವಾಗ ಬಾಲ್ ಬಿತ್ತೆಂದು ಹೆಕ್ಕಿಕೊಳ್ಳಲು ಹೋದಾಗ ದುರ್ಘಟನೆ ನಡೆದಿದೆ ಎಂದು ಹೇಳುವ ಮೂಲಕ ಬೆಸ್ಕಾಂ ಅಧಿಕಾರಿಗಳ ತಪ್ಪೇ ಇಲ್ಲವೆಂಬಂತೆ ಮಾತನಾಡಿದ್ದಾರೆ. ಹಾಗಾದರೆ ಈ ಘಟನೆಗೆ ಯಾರು ಹೊಣೆ ಎಂಬ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

ಇಂದು ಶಾಸಕರು ಬಾಲಕ ಸಾಯಿಚರಣ್ ಆರೋಗ್ಯ ವಿಚಾರಿಸಲು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿದ್ರು. ಚಿಕಿತ್ಸೆಯ ವೆಚ್ಚವನ್ನ ಸಂಪೂರ್ಣವಾಗಿ ನಾನೇ ಭರಿಸುತ್ತೇನೆ. ಇಂತಹದ್ದೇ ಘಟನೆ ಶುಕ್ರವಾರವೂ ನಡೆದಿದೆ. ಈ ಎರಡೂ ಪ್ರಕರಣದ ಬಗ್ಗೆ ಇಂದಿನ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಕುಮಾರಸ್ಬಾಮಿ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಘಟನೆಯೇನು?
ಇತ್ತೀಚೆಗಷ್ಟೇ ಎಲ್ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ಈ ಘಟನೆ ಮಾಸುವ ಮುನ್ನವೇ ಶುಕ್ರವಾರ ಸಂಜೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ 7ನೇ ಕ್ರಾಸ್ನಲ್ಲಿ 9 ವರ್ಷದ ಸಾಯಿ ಚರಣ್ ಇಂತದ್ದೇ ಘಟನೆಯೊಂದರಲ್ಲಿ ಗಂಭೀರ ಗಾಯಗೊಂಡಿದ್ದಾನೆ.

ಸಾಯಿ ಚರಣ್ ಸಂಜೆ ಸ್ನೇಹಿತರೊಂದಿಗೆ ಬಾಲ್ ಆಟ ಆಡುತ್ತಿದ್ದನು. ಈ ವೇಳೆ ವಿದ್ಯುತ್ ಕಂಬದ ಹತ್ತಿರ ಹೋದಾಗ ಕಂಬದಿಂದ ಜೋತು ಬಿದ್ದಿದ್ದ ವಯರ್ನಿಂದ ಕರೆಂಟ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, 24 ಗಂಟೆಗಳ ಕಾಲ ಏನೂ ಹೇಳುವುದಕ್ಕೂ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಬಾಲಕ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
https://www.youtube.com/watch?v=o5p0qsTrd3U

Leave a Reply