ಬೇಲೂರು ಶಾಸಕ ರುದ್ರೇಶ್‍ಗೌಡ ಇನ್ನಿಲ್ಲ

ಹಾಸನ: ಬೇಲೂರು ತಾಲೂಕಿನ ಕಾಂಗ್ರೆಸ್ ಶಾಸಕ ವೈಎನ್ ರುದ್ರೇಶ್ ಗೌಡ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ವೈಎನ್ ರುದ್ರೇಶ್ ಗೌಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಉಸಿರಾಟದ ತೊಂದರೆ, ಬಹುಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕ್ಷೀಣವಾಗಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಐಸಿಯುನಲ್ಲಿ ಕೊನೆಯುಸಿರೆಳೆದಿದ್ದಾರೆ.

ಶಾಸಕರ ನಿಧನದಿಂದ ಸ್ವಕ್ಷೇತ್ರ ಬೇಲೂರಿನಲ್ಲಿ ಮೌನ ಮಡುಗಟ್ಟಿದ್ದು, ಅಂತಿಮ ದರ್ಶನಕ್ಕಾಗಿ ಬೇಲೂರಿನ ಕಾಲೇಜು ಮೈದಾನದಲ್ಲಿ ಪೊಲೀಸರಿಂದ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಸಂಜೆ ವೇಳೆಗೆ ಮೃತದೇಹ ಹಾಸನಕ್ಕೆ ಬರುವ ನಿರೀಕ್ಷೆ ಇದೆ. ಈಗಾಗಲೇ ಶಾಸಕರ ಕುಟುಂಬ ಸದಸ್ಯರು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಅನಾರೋಗ್ಯದ ಕಾರಣ ರುದ್ರೇಶ್‍ಗೌಡ ಶುಕ್ರವಾರದಂದು ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಆಗಿರಲಿಲ್ಲ. ಹೀಗಾಗಿ ಶುಕ್ರವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.

ರಾಜ್ಯಸಭೆ ಚುನಾವಣೆಗೆ ಬೆಂಗಳೂರಿಗೆ ಬಂದಿದ್ದ ರುದ್ರೇಶ್ ಗೌಡರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Comments

Leave a Reply

Your email address will not be published. Required fields are marked *