‘ಪಕ್ಕೆಲುಬು’ ವಿಡಿಯೋ ವೈರಲ್ ಮಾಡಿದ್ದ ಶಿಕ್ಷಕ ಅಮಾನತು

ಬಳ್ಳಾರಿ: ಶಾಲೆಯ ಮುಗ್ಧ ಬಾಲಕನಿಗೆ ಪಕ್ಕೆಲುಬು ಶಬ್ದವನ್ನು ಉಚ್ಚರಿಸುವಂತೆ ಹೇಳಿಕೊಟ್ಟು, ಬಾಲಕ ಅದನ್ನು ತಪ್ಪು ತಪ್ಪಾಗಿ ಹೇಳುವ ವಿಡಿಯೋ ಮಾಡಿ ವೈರಲ್ ಮಾಡಿದ್ದ ಶಾಲಾ ಶಿಕ್ಷಕ ಕೊನೆಗೂ ಪತ್ತೆಯಾಗಿದ್ದಾನೆ.

ಹೌದು. ಶಾಲಾ ಬಾಲಕನೋರ್ವ ತೊದಲು ತೊದಲಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ ಚಂದ್ರಶೇಖರಪ್ಪಾ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದರು. ಹೀಗಾಗಿ ಶಿಕ್ಷಕನನ್ನು ತಾಲೂಕಿನ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ಇತ್ತ ವಿಡಿಯೋ ವೈರಲ್ ಆಗುತಿದ್ದಂತೆಯೇ ಶಿಕ್ಷಣ ಸಚಿವರು ಎಚ್ಚೆತ್ತುಕೊಂಡು ಕೂಡಲೇ ಶಿಕ್ಷಕನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚನೆ ನೀಡಿದ್ದರು. ಸಚಿವರು ನೀಡಿದ್ದ ಆದೇಶದ ಪ್ರತಿ ಸಹ ವೈರಲ್ ಆಗಿತ್ತು. ಹೀಗಾಗಿ ವಿಷಯ ತಿಳಿದು ಹೂವಿನಹಡಗಲಿ ತಾಲೂಕಿನ ಬಿಇಓ ನಾಗರಾಜ್ ಅವರು ಶಿಕ್ಷಕನ ವಿಚಾರಣೆ ನಡೆಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ನಂತರ ಶಿಕ್ಷಕರನ್ನು ಅಮಾನತ್ತಿನ ವಿಚಾರವಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಶಿಕ್ಷಕ ಚಂದ್ರಶೇಖರ್ ಅವರು ತುಂಬಾ ಒಳ್ಳೆಯವರು. ಹೀಗಾಗಿ ಅಮಾನತು ಆದೇಶ ಹಿಪಡೆಯುವಂತೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *