ಹೆತ್ತ ತಾಯಿ ಕಣ್ಣೆದುರೇ ಪ್ರಾಣ ಬಿಟ್ಟ ಬಾಲಕ

– ಬಸ್ ಹರಿದು 6ನೇ ತರಗತಿ ವಿದ್ಯಾರ್ಥಿ ಸಾವು

ಬಳ್ಳಾರಿ: ಕೆಎಸ್ಆರ್‌ಟಿಸಿ ಬಸ್ ಹರಿದು 10 ವರ್ಷದ ಬಾಲಕ ತಾಯಿಯ ಕಣ್ಣ ಎದುರೇ ದಾರುಣವಾಗಿ ಸಾವಿಗೀಡಾದ ಘಟನೆ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದೆ.

ಸಿದ್ದೇಶ ಅಪಘಾತದಲ್ಲಿ ಮೃತಪಟ್ಟ ಬಾಲಕ. ಹರಪನಹಳ್ಳಿ ತಾಲೂಕು ಕೆ.ಕಲ್ಲಹಳ್ಳಿ ನಿವಾಸಿಯಾಗಿದ್ದ ಸಿದ್ದೇಶ, ಬುಧವಾರ ತನ್ನ ತಾಯಿಯ ಜೊತೆ ಹರಪನಹಳ್ಳಿಗೆ ಬಂದಿದ್ದರು. ಈ ವೇಳೆ ರಸ್ತೆ ದಾಟುವಾಗ ವೇಗವಾಗಿ ಬಂದ ಸಾರಿಗೆ ಬಸ್ ಬಾಲಕನ ಮೇಲೆ ಹರಿದಿದೆ. ಪರಿಣಾಮ ಸಿದ್ದೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಗರದ ಹೊಸ ಬಸ್ ನಿಲ್ದಾಣ ಬಳಿ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಘಟನೆ ನಡೆದಿದೆ.

ರಸ್ತೆಯ ಬದಿಯಲ್ಲಿ ತಾಯಿಯೊಂದಿಗೆ ನಿಂತಿದ್ದ ಸಿದ್ದೇಶ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ವೇಗವಾಗಿ ಬಂದ ಬಸ್ ಬಾಲಕನ ಮೇಲೆ ಹರಿದಿದೆ. ಕ್ಷಣ ಮಾತ್ರದಲ್ಲಿ ನಡೆದ ಅಪಘಾತದಲ್ಲಿ ಮಗ ತಾಯಿಯ ಕಣ್ಣೆದುರೇ ಸಾವನ್ನಪ್ಪಿದ್ದು, ಮಗುವಿನ ರಕ್ತಸಿಕ್ತ ದೇಹವನ್ನು ಹಿಡಿದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಅಪಘಾತವನ್ನು ಕಂಡ ಜನ ಸಾರಿಗೆ ಬಸ್ ಚಾಲಕನಿಗೆ ಹಿಡಿ ಶಾಪ ಹಾಕಿದ್ದಾರೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *