ಮಗುವಿನ ಕಣ್ಣೀರಿಗೆ ಕರಗಿದ ಸಿಎಂ – ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಬಿಎಸ್‍ವೈ

– ನಿಮ್ಮ ಸೇವೆಗೆ ಸರ್ಕಾರ ಗೌರವಕೊಡುತ್ತದೆ

ಬೆಂಗಳೂರು: ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಕರಗಿದ ಸಿಎಂ ಯಡಿಯೂರಪ್ಪ ಸ್ವತಃ ತಾವೇ ನರ್ಸ್‍ಗೆ ಕರೆಮಾಡಿ ಮಾತನಾಡಿದ್ದಾರೆ. ಜೊತೆಗೆ ನಿಮ್ಮ ಜೊತೆ ನಾವೀದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಇಂದು ನರ್ಸ್ ಸುನಂದಾ ಅವರಿಗೆ ಕರೆ ಮಾಡಿ ಮಾತನಾಡಿರುವ ಬಿಎಸ್‍ವೈ, ನಿನ್ನ ಜೊತೆ ನಾವಿದ್ದೇವೆ. ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಗೌರವ ಕೊಡುತ್ತದೆ ಎಂದು ಅಭಯ ನೀಡಿದ್ದಾರೆ.

ಬೆಳಗಾವಿ ಭೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಸುನಂದಾ ಅವರು ಮನೆಗೆ ಹೋಗದೇ 15 ದಿನ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಬಂದಿದ್ದ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆಯೇ ಮುಂದೆಯೇ ಅಮ್ಮ ಬೇಕು ಎಂದು ಕಣ್ಣೀರು ಹಾಕಿದ್ದಳು. ಮಗಳು ಮತ್ತು ಅಮ್ಮನ ಕಣ್ಣೀರಿನ ದೃಶ್ಯವನ್ನು ನೋಡಿ ಜನರ ಕಣ್ಣಿಂಚಿನಲ್ಲಿ ನೀರು ತರಿಸಿತ್ತು.

ಬೆಳಗಾವಿಯಲ್ಲಿ ಸದ್ಯ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಆದ್ದರಿಂದ ಅವರಿಗೇ ಚಿಕಿತ್ಸೆ ನೀಡಲು ಅಲ್ಲಿನ ನರ್ಸ್ ಮತ್ತು ವೈದ್ಯರು ಮನೆಗೆ ಹೋಗದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸುನಂದಾ ಅವರು ಕೂಡ ಮನೆಗೆ ಹೋಗಿರಲಿಲ್ಲ. ಆದರೆ ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿರುತ್ತಾಳೆ. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಮಂಗಳವಾರ ತಂದೆ ಸಂತೋಷ್ ಅವರು ಪತ್ನಿ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರಿದ್ದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದ್ದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮನಿಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು. ಈ ದೃಶ್ಯ ನೋಡಿ ರಾಜ್ಯದ ಜನರು ಮಮ್ಮಲ ಮರುಗಿದ್ದರು.

Comments

Leave a Reply

Your email address will not be published. Required fields are marked *