ಆಕಸ್ಮಿಕವಾಗಿ ಸಿಡಿದ ಗುಂಡು – ಬೆಳಗಾವಿಯ ಯೋಧ ಚೆನ್ನೈನಲ್ಲಿ ಸಾವು

ಬೆಳಗಾವಿ: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ (Indian Navy) ಯೋಧ ಸಾವಿಗೀಡಾದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ.

ಮೃತ ಯೋಧನನ್ನು ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದು, ಗುಂಡು ಅವರ ತಲೆಗೆ ತಗುಲಿ ಸಾವನ್ನಪ್ಪಿದ್ದಾರೆ.

ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಅವರು ಮಾತನಾಡಿದ್ದರು. ಇನ್ನೂ 2020ರ ಫೆ.12 ರಂದು ನೌಕಾಪಡೆಗೆ ಸೇರಿದ್ದರು. ಕಾಕತಾಳಿಯ ಎಂಬಂತೆ ಅದೇ ದಿನ ಅವರು ಇಹಲೋಕ ತ್ಯಜಿಸಿದ್ದಾರೆ.

ಕಲ್ಲೋಳಿಗೆ ಪಾರ್ಥಿವ ಶರೀರ ತಲುಪಿದ್ದು, ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು (ಫೆ.14) ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಾಯ್ತಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.