ಗೋಡೆ ಕುಸಿಯೋದನ್ನು ನೋಡಲು ಹೋಗಿ 7 ಮಂದಿ ಸಾವು

– ಸಿಎಂ ದೂರವಾಣಿ ಕರೆ,  5 ಲಕ್ಷ ಪರಿಹಾರ ಘೋಷಣೆ

ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಗೆ ಹಳೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಮತ್ತು ಪಕ್ಕದ ಮನೆಯ ಬಾಲಕಿ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಸತತ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಹಳೆ ಗೋಡೆ ಒದ್ದೆ ಆಗಿತ್ತು. ಆ ಗೋಡೆ ಬೀಳುವುದನ್ನು ನೋಡಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಸುರೇಶ್ ಖಾನಗಾವಿ ಕುಟುಂಬದ ಲಕ್ಷ್ಮಿ ಅರ್ಜುನ್ ಖಾನಗಾವಿ(15), ಶಾಂತವ್ವ ಭೀಮಪ್ಪ ಖಾನಗಾವಿ(50), ಅರ್ಜುನ್ ಹನಮಂತ ಖಾನಗಾವಿ, ಸತ್ಯವ್ವ ಅರ್ಜುನ್ ಖಾನಗಾವಿ(45), ಪೂಜಾ ಅರ್ಜುನ್ ಖಾನಗಾವಿ(8), ಸವಿತಾ ಭೀಮಪ್ಪ ಖಾನಗಾವಿ(28) ಮತ್ತು ಪಕ್ಕದ ಮನೆಯ ಬಾಲಕಿ ಕಾಶವ್ವ ವಿಠ್ಠಲ ಕೊಳೆಪ್ಪನವರ(8) ಸಾವನ್ನಪ್ಪಿದ್ದಾರೆ.

ಸುರೇಶ್ ಖಾನಗಾವಿ ಕುಟುಂಬ ತಮ್ಮ ಹಳೆಯ ಮನೆಯನ್ನು ಬೀಳಿಸಿ ಹೊಸ ಮನೆ ಕಟ್ಟುವ ಸಿದ್ಧತೆಯಲ್ಲಿದ್ದರು. ಅದಕ್ಕಾಗಿಯೇ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ಅಲ್ಲೇ ವಾಸವಾಗಿದ್ದರು. ಗೋಡೆ ಕುಸಿಯುತ್ತಿದ್ದಂತೆ ಪ್ರಾಣ ರಕ್ಷಣೆಗೆ ಓಡಿದರೂ ಪ್ರಾಣ ಉಳಿಯಲಿಲ್ಲ. ಅಂಗಡಿಗೆ ಹೋಗಿದ್ದ ಮನೆಯ ಯಜಮಾನ ಸುರೇಶ್ ಖಾನಗಾವಿ ಮತ್ತು ಇನ್ನೊಬ್ಬ ಪುತ್ರ ಮಾತ್ರ ಬದುಕುಳಿದಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಎಎಸ್ ಅಧಿಕಾರಿಗಳಾಗುತ್ತಾರೆ- ಹೆಚ್‍ಡಿಕೆಗೆ ಕೋಟಾ ತಿರುಗೇಟು

ದುರಂತದಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಮನೆಯ ಯಜಮಾನ ಸುರೇಶ್ ಖಾನಗಾವಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ದುರಂತದ ಬಗ್ಗೆ ಮಾಹಿತಿ ಪಡೆದು ಸಂತಾಪ ತಿಳಿಸಿ ಧೈರ್ಯ ತುಂಬಿದರು. ಅಲ್ಲದೆ ಮೃತರ ಕುಟುಂಬಕ್ಕೆ ಬೊಮ್ಮಾಯಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಿಲ್ಲಾಧಿಕಾರಿ ಎಸ್.ಜಿ.ಹಿರೇಮಠ್ ಭೇಟಿ ನೀಡಿದರು. ಇದನ್ನೂ ಓದಿ: ದಿಢೀರ್‌ ಆರ್‌ಎಸ್‌ಎಸ್‌ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?

Comments

Leave a Reply

Your email address will not be published. Required fields are marked *