ಕುಡುಕನಿಂದ ವೈದ್ಯರ ಮೇಲೆ ಹಲ್ಲೆ, ಪೊಲೀಸ್ ಜೀಪ್ ಕೆಳಗೆ ಮಲಗಿ ರಂಪಾಟ

ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಕಳೆದ 43 ದಿನಗಳಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ನಿನ್ನೆಯಿಂದ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಕಂಟೈನಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಮದ್ಯ ಸಿಕ್ಕಿದ್ದೇ ತಡ ಕೆಲವೆಡೆ ಕುಡುಕರ ರಂಪಾಟ, ಗಲಾಟೆಗಳು ಜೋರಾಗಿ ಶುರುವಾಗಿವೆ. ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕುಡುಕನೊಬ್ಬ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಬೆಡಕಿಹಾಳ ಗ್ರಾಮದ ಸಂಜೀವ್ ಕುಮಾರ್ ಬಣವಾನೆ ವೈದ್ಯರ ಮೇಲೆ ಹಲ್ಲೆ ಮಾಡಿದ ಕುಡುಕ. ಇದನ್ನೂ ಓದಿ: ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

ಸಂಜೀವ್ ಕುಮಾರ್ ಮದ್ಯದ ಮತ್ತಿನಲ್ಲಿ ತನ್ನ ಕೈಗೆ ಗಾಯ ಮಾಡಿಕೊಂಡು ಯಕ್ಸಂಬಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ. ಚಿಕಿತ್ಸೆ ನೀಡಲು ಮುಂದಾದ ವೈದ್ಯರ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ವೈದ್ಯರು ಪ್ರಕರಣ ಕುರಿತು ಸದಲಾಗ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು ಸಂಜೀವ್ ಕುಮಾರ್ ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕುಡಿಯಲು ಹಣ ಕೊಡದ್ದಕ್ಕೆ ಗರ್ಭಿಣಿ ಪತ್ನಿ ತಲೆಗೆ ಗುಂಡು ಹೊಡೆದ- ಭಯದಿಂದ ಪೊದೆಯಲ್ಲಿ ಅವಿತ ಮಗ

ಠಾಣೆಯಲ್ಲೂ ಸಂಜೀವ್ ಕುಮಾರ್ ರಂಪಾಟ ನಿಲ್ಲಲಿಲ್ಲ. ಪೊಲೀಸ್ ಠಾಣೆ ಮುಂದೆ ನಿಂತಿದ್ದ ಜೀಪ್ ಕೆಳೆಗೆ ಮಲಗಿ ನನ್ನ ಮೇಲೆ ಜೀಪ್ ಹರಿಸಿ, ಸಾಯಿಸಿ ಎಂದು ರಂಪಾಟ ಮಾಡಿದ್ದಾನೆ. ಠಾಣೆ ಮುಂದೆ ಕುಡುಕನ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಸಂಜೀವ್ ಕುಮಾರ್ ಬಣವಾನೆ ವಿರುದ್ಧ ಪ್ರಕರಣ ದಾಖಲಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಸಿದ್ದಾರೆ.

Comments

Leave a Reply

Your email address will not be published. Required fields are marked *