ಗುಟ್ಕಾ ತಿಂದು ಉಗಿದವನ ಶರ್ಟ್ ಬಿಚ್ಚಿಸಿ ರಸ್ತೆ ಸ್ವಚ್ಛಗೊಳಿಸಿದ್ರು

ಚಿಕ್ಕೋಡಿ(ಬೆಳಗಾವಿ): ಗುಟ್ಕಾ ತಿಂದು ರಸ್ತೆಯಲ್ಲೇ ಉಗಿದಿದ್ದವನ ಶರ್ಟ್ ಬಿಚ್ಚಿಸಿ ಅದರಿಂದಲೇ ರಸ್ತೆ ಸ್ವಚ್ಛ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆದಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದ ರಸ್ತೆಗಳನ್ನ ಪೌರ ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯಪುರ ಮೂಲದ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ರಸ್ತೆಯಲ್ಲಿಯೇ ಉಗುಳಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ನಿಪ್ಪಾಣಿ ನಗರ ಸಭೆಯ ಪೌರಾಯುಕ್ತ ಮಹಾವೀರ ಬೋರಣ್ಣವರ ಗುಟ್ಕಾ ತಿಂದು ಉಗಳುವುದನ್ನ ಗಮನಿಸಿ ವ್ಯಕ್ತಿಯನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ ಅಲ್ಲೇ ವ್ಯಕ್ತಿಯ ಶರ್ಟ್ ಬಿಚ್ಚಿಸಿ ಅದರಿಂದಲೇ ಉಗಿದಿದ್ದ ಗುಟ್ಕಾವನ್ನ ಸ್ವಚ್ಛ ಮಾಡಿಸಿ ಸ್ಥಳದಲ್ಲೆ ಶಿಕ್ಷೆ ನೀಡಿದ್ದಾರೆ. ವ್ಯಕ್ತಿ ಶುಚಿಗೊಳಿಸುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ನಿಪ್ಪಾಣಿ ನಗರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *