ಅಪಘಾತದಿಂದ ಬಿದ್ದು ನರಳಾಡಿದ್ರೂ ಕ್ಯಾರೇ ಎನ್ನದ ಜನ

ಬೆಳಗಾವಿ: ಬೈಕ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಗಾಯಗೊಂಡು ನರಳಾಡುತ್ತಿದ್ದರೂ ಸ್ಥಳದಲ್ಲಿದ್ದ ಯಾರೊಬ್ಬರೂ ಸಹಾಯಕ್ಕೆ ಬಾರದೆ ಅಮಾನವೀಯತೆ ಮೆರೆದ ಘಟನೆ ಇಂದು ನಗರದಲ್ಲಿ ನಡೆದಿದೆ.

ವಿಜಯ್ ಗಾಯಗೊಂಡು ನರಳಾಡಿದ ಪಾದಚಾರಿ. ವಿಜಯ್ ಅವರು ನಗರದ ಟೀಳಕವಾಡಿಯ ಎರಡನೇ ರೇಲ್ವೆ ಗೇಟ್ ಬಳಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಸವಾರ ವಿಜಯ್ ಅವರಿಗೆ ಡಿಕ್ಕಿಹೊಡೆದಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಸವಾರ ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ವಿಜಯ್ ಅವರ ಕತ್ತಿನ ಭಾಗಕ್ಕೆ ಗಾಯವಾಗಿತ್ತು. ನೆಲಕ್ಕೆ ಬಿದ್ದು ನರಳಾಡುತ್ತಿದ್ದ ಅವರನ್ನು ಕೆಲವರು ನೋಡುತ್ತ ನಿಂತರೇ ಹೊರತು ಸಹಾಯಕ್ಕೆ ಬರಲಿಲ್ಲ. ಘಟನೆಗೂ ಮುನ್ನ ಮಳೆಯಾಗಿದ್ದರಿಂದ ಕೆಸರಿನಲ್ಲಿ ವಿಜಯ್ ಬಿದ್ದು ಒದ್ದಾಡಿದ್ದಾರೆ. ಖಾಸಗಿ ವಾಹನದಲ್ಲಿ ಅವರನ್ನು ಕರೆದುಕೊಂಡು ಹೋಗುವ ಬದಲು ಅಂಬುಲೆನ್ಸ್ ಬರಲಿ ಎಂದು ಕೆಲವರು ಕಾಲಹರಣ ಮಾಡಿದ್ದಾರೆ.

ಕೆಸರಿನಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಜಯ್ ಅವರನ್ನು ಸುಮಾರು ಅರ್ಧ ಗಂಟೆ ಬಳಿಕ ಅಂಬುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಜಯ್ ಅವರ ಸ್ಥಿತಿ ಚಿಂತಾಚನಕವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಟೀಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *