ಫಲಿತಾಂಶಕ್ಕೂ ಮೊದಲೇ ಜೆಡಿಎಸ್, ಕಾಂಗ್ರೆಸ್ ಶಾಸಕರು ಬುಕ್?

ಬೆಂಗಳೂರು: ಫಲಿತಾಂಶಕ್ಕೂ ಮೊದಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಬುಕ್ ಆಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಹೌದು. ಸಾಧಾರಣವಾಗಿ ಶಾಸಕರ ಬೆಂಬಲ ಇಲ್ಲದೇ ಇದ್ದರೆ ಯಾರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರ್ಧಾರವನ್ನು ಮಾಡುವುದಿಲ್ಲ. ಆದರೆ ಬಿಎಸ್‍ವೈಗೆ ಶಾಸಕರ ಬೆಂಬಲ ಇಲ್ಲದೇ ಇದ್ದರೂ ಧೈರ್ಯವಾಗಿ ಪ್ರಮಾಣವಚನ ಸ್ವೀಕರಿಸಿದ್ದು ನೋಡಿದಾಗ ಈ ಮೇಲಿನ ಪ್ರಶ್ನೆ ಈಗ ಸೃಷ್ಟಿಯಾಗಿದೆ.

ಬಹುತೇಕ ಸಮೀಕ್ಷೆಗಳಲ್ಲಿ ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿಯ ಟಾಪ್ ನಾಯಕರು ಫಲಿತಾಂಶಕ್ಕೆ ಮೊದಲೇ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಧೈರ್ಯದಲ್ಲೇ ಬಿಎಸ್‍ವೈ ಪ್ರಮಾಣವಚನ ಸ್ವೀಕರಿಸಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಈಗಾಗಲೇ ಬಹುಮತ ಸಾಬೀತು ಪಡಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಬಿಜೆಪಿ ಕಚೇರಿಯಲ್ಲೇ ರಾಜ್ಯ ಉಸ್ತುವಾರಿಗಳಾದ ಮುರಳೀಧರ್ ರಾವ್, ಪ್ರಕಾಶ್ ಜಾವಡೇಕರ್ ರಾಜ್ಯದ ನಾಯಕರಾದ ಆರ್. ಅಶೋಕ್, ಶ್ರೀರಾಮುಲು, ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಬಿಜೆಪಿ ನಾಯಕರ ನಡೆಗೆ ಪುಷ್ಠಿ ಎನ್ನುವಂತೆ ಫಲಿತಾಂಶ ಪ್ರಕಟವಾದ ಮೇ 15 ಸಂಜೆ 6.30ರ ವೇಳೆ ಮೈಸೂರಿನ ಸಂಸ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರ ರಚನೆ ಮಾಡೋ ಬಗ್ಗೆ ಯಾರಿಗಾದರೂ ಡೌಟ್ ಇದೆಯಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಗುರುವಾರ ರಾತ್ರಿ ನಿನ್ನೆ ನಾನು ಏನು ಹೇಳಿದ್ದೆ. ನಾಳೆ ಅದೇ ಆಗುತ್ತೆ! ಮುಖ್ಯಮಂತ್ರಿ ಬಿಎಸ್‍ವೈ ಎಂದು ಬರೆದು ಮತ್ತೊಂದು ಟ್ವೀಟ್ ಮಾಡಿದ್ದರು.

ಸಂಖ್ಯಾಬಲ ಇಲ್ಲದೇ ಇದ್ದರೂ ಹೇಗೆ ಬಹುಮತವನ್ನು ತೋರಿಸುತ್ತಿರಿ ಎಂದು ಕೇಳಿದ್ದಕ್ಕೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಸಿಎಂ ಆಗುತ್ತಿರುವುದು ಖುಷಿ ತಂದಿದೆ. ಬಹುಮತ ಸಾಬೀತು ಹೇಗೆ ಮಾಡುತ್ತೇವೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲು ಬರುವುದಿಲ್ಲ. ಅದು ಪಕ್ಷದ ಆಂತರಿಕ ವಿಚಾರ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಊಹಿಸಲೂ ಸಾಧ್ಯವಾಗದಷ್ಟು ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು

Comments

Leave a Reply

Your email address will not be published. Required fields are marked *