ಪ್ರವಾಸಿ ಮಾರ್ಗದರ್ಶಿಗಳ ಅನ್ನ ಕಸಿದುಕೊಂಡ ಕೊರೊನಾ

ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ದೇಶ-ವಿದೇಶ, ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಪ್ರತಿನಿತ್ಯ ನೂರಾರು ಮಂದಿ ಚನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ದೇವಾಲಯದ ಇತಿಹಾಸದ ಬಗ್ಗೆ ತಿಳಿಸಲು ಸುಮಾರು ಮೂವತ್ತು ಮಂದಿ ಗೈಡ್‍ಗಳು ಜಿಲ್ಲೆಯಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಆದರೆ ಕೊರೊನಾದಿಂದ ಪ್ರವಾಸಿಗರು ಕಡಿಮೆ ಬರುತ್ತಿದ್ದು, ಮಾರ್ಗದರ್ಶಿಗಳು ತುಂಬಾ ತೊಂದರೆಯಾಗಿದೆ. ಅಲ್ಲದೆ ಅವರಿಗೆ ತಮ್ಮ ದಿನನಿತ್ಯ ಜೀವನ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆ.

ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿಗರು ನೀಡುವ ಅಷ್ಟೋ ಇಷ್ಟೋ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣ ದೇವಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಇದರಿಂದಾಗಿ ಮಾರ್ಗದರ್ಶಿಗಳಿಗೆ ದಿನದ ಸಂಪಾದನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

ಒಮ್ಮೆ ಲಾಕ್‍ಡೌನ್ ವೇಳೆ ಸರ್ಕಾರ ಐದು ಸಾವಿರ ಪರಿಹಾರ ನೀಡಿದ್ದನ್ನು ಬಿಟ್ಟರೆ ಇದುವರೆಗೂ ಇವರ ಕಷ್ಟ ಕೇಳುವವರಿಲ್ಲ. ಈ ಹಿಂದೆ ಪ್ರತಿನಿತ್ಯ ಮೂವತ್ತು ಮಂದಿ ಗೈಡ್ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಪ್ರವಾಸಿಗರ ಕೊರತೆ ಎದುರಾಗಿದ್ದು, ಹದಿನೈದು ಮಂದಿಯಂತೆ ಎರಡು ಬ್ಯಾಚ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಒಂದು ತಂಡ ಕೆಲಸ ಮಾಡಿದರೆ ಮಾರನೇ ದಿನ ಇನ್ನೊಂದು ಬ್ಯಾಚ್ ಕೆಲಸ ಮಾಡುತ್ತಿದೆ. ಒಬ್ಬರಿಗೆ ಆದಾಯ ಬಂದರೂ ಎಲ್ಲರೂ ಆ ಹಣವನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಶಾಲೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಕಣ್ಣೀರುಡುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 600 ಮಂದಿ ಗೈಡ್‍ಗಳಿದ್ದು, ಅವರ ಜೀವನ ನಿರ್ವಹಣೆ ಹೇಳತೀರದಾಗಿದೆ. ಈಗಾಗಲೇ ಸರ್ಕಾರಕ್ಕೆ, ಸಂಬಂಧಪಟ್ಟ ಸಚಿವರಿಗೆ ಹತ್ತಾರು ಭಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

ಕುಟುಂಬ ನಿರ್ವಹಣೆಗೆ ಕೈಸಾಲ, ಬ್ಯಾಂಕ್ ಸಾಲ ಮಾಡಿದ್ದು, ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಪ್ರವಾಸಿಗರಿಗಾಗಿ ಕಣ್ಕಣ್ಣು ಬಿಟ್ಟು ಕಾಯುವಂತಾಗಿದೆ. ಇದು ಹೀಗಿಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಗೈಡ್‍ಗಳೇ ಇಲ್ಲದಂತಾಗುತ್ತಾರೆ. ಇನ್ನಾದರೂ ಸರ್ಕಾರ ಹಾಗೂ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಗೈಡ್‍ಗಳ ಹಿತಕಾಯಬೇಕಿದೆ.

Comments

Leave a Reply

Your email address will not be published. Required fields are marked *