ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಕೈ ಬಿಟ್ಟ ಬಿಬಿಎಂಪಿ?

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಮಾಡುವುದಾಗಿ ತಿಳಿಸಿದ್ದ ಬಿಬಿಎಂಪಿ ಈಗ ಜಾಣಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಮ್ಮಿಶ್ರ ಸರ್ಕಾರದ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ರಾಜಕಾಲುವೆ ಅಕ್ರಮ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವುದಾಗಿ ಹೇಳಿದ್ದರು. ಅಲ್ಲದೇ ಸರ್ವೇ, ಮಾರ್ಕಿಂಗ್ ಕಾರ್ಯ ಮುಗಿಯುವ ಮೊದಲೇ, ತೆರವು ಮಾಡುತ್ತೀವಿ ಎಂದು ಹೇಳಿದ್ದರು. ಸದ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದರೇ ಬಿಬಿಎಂಪಿ ಒತ್ತುವರಿ ಕಾರ್ಯಾಚರಣೆಗೆ ಎಳ್ಳು-ನೀರು ಬಿಟ್ಟಂತೆ ಕಾಣುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಒತ್ತುವರಿ ತೆರವು ಮಾಡುತ್ತೀವಿ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಪಾಲಿಕೆಯು, ಅಕ್ಟೋಬರ್ 27ಕ್ಕೆ ತೆರವು ಕಾರ್ಯಚರಣೆಗೆ ಚಾಲನೆ ನೀಡಬೇಕಿತ್ತು. ಆದರೆ ಇದೀಗ ಬಿಬಿಎಂಪಿ ಸದ್ಯ ಸರ್ವೇ ಕಾರ್ಯ ಮಾತ್ರ ಸಂಪೂರ್ಣವಾಗಿದೆ ಎನ್ನುವ ಮೂಲಕ ಕಳೆದ ನಾಲ್ಕು ತಿಂಗಳಿಂದ ರಾಜಕಾಲುವೆ ಒತ್ತುವರಿಯ ಸರ್ವೇ ಮಾಡುವ ಡ್ರಾಮಾ ಮಾಡುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ತೆರವು ಕಾರ್ಯ ಕೈಬಿಟ್ಟಿದೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ.

ಇದಲ್ಲದೇ ಸಮ್ಮಿಶ್ರ ಸರ್ಕಾರ ಒತ್ತುವರಿ ಮತ್ತು ಭೂಕಬಳಿಕೆ ತಡೆಗೆ ರಚಿಸಿದ್ದ ಬೆಂಗಳೂರು ಮೆಟ್ರೊಪಾಲಿಟನ್ ಕಾರ್ಯಪಡೆಗೆ(ಬಿಎಂಟಿಎಫ್) ಇತಿಶ್ರೀ ಹಾಡಲು ಮುಂದಾಗುವುದರ ಜೊತೆಗೆ ಸ್ಲಮ್ ಬೋರ್ಡ್ ಹಾಗೂ ಬಿಡಿಎ ಪೊಲೀಸ್ ವಿಂಗ್ ಮುಚ್ಚಿಸಿ, ಹೊಸ ಸೆಕ್ಯೂರಿಟಿ ಫೋರ್ಸ್ ತರಲು ಚಿಂತನೆ ನಡೆಸಿದೆ ಎನ್ನುವ ಮಾಹಿತಿಗಳು ಸಹ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *