ಕಮಿಷನರ್ ಭೇಟಿಗೆ ಆಂಬುಲೆನ್ಸ್ ಬಳಕೆ ಮಾಡಿದ ಬಿಬಿಎಂಪಿ ಅಧಿಕಾರಿಗಳು!

ಬೆಂಗಳೂರು: ರಸ್ತೆಯಲ್ಲಿ ಆಂಬುಲೆನ್ಸ್ ಬಂದ್ರೆ ದಾರಿ ಬಿಟ್ಟು ಜೀವ ಉಳಿಸಿ ಅನ್ನೋ ಜಾಹಿರಾತುಗಳನ್ನ ಹಲವು ಕಡೆ ನೋಡಿರ್ತೀವಿ. ಜೊತೆಗೆ ನಮಗೆ ಎಷ್ಟೇ ಅರ್ಜೆಂಟ್ ಇದ್ರೂ ಆಂಬುಲೆನ್ಸ್ ಸದ್ದು ಕೇಳಿದ ತಕ್ಷಣ ದಾರಿ ಬಿಟ್ಟು ಕೊಡ್ತೀವಿ. ಆದ್ರೆ ಅದ್ರಲ್ಲಿ ನಿಜವಾಗ್ಲೂ ಪೇಷೆಂಟ್‍ಗಳೇ ಹೊಗ್ತಿರ್ತಾರಾ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.

ಇದೀಗ ಆಂಬುಲೆನ್ಸ್ ನಲ್ಲಿ ಬಿಬಿಎಂಪಿ ಅಧಿಕಾರಿಗಳು ಓಡಾಡುತ್ತಾರೆ. ಅದರಲ್ಲೂ ಕಮಿಷಿನರ್ ಮೀಟ್ ಮಾಡೋಕೆ ಆಂಬುಲೆನ್ಸ್ ಬಳಕೆ ಮಾಡ್ತಿದ್ದಾರೆ ಅಂದ್ರೆ ನಂಬಲೇಬೇಕು. ಹೌದು. ಬಿಬಿಎಂಪಿ ದಾಸಪ್ಪ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ರೋಗಿಗಳ ಸಹಾಯಕ್ಕೆ ಮೀಸಲಿರೋ ಆಂಬುಲೆನ್ಸ್ ನನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ತಿದ್ದಾರೆ.

ಫೆ. 21ರಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿಗಾಗಿ ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡ್ತಿರೋ ಮ್ಯಾನೇಜರ್ ಶೋಭಾ ಲಕ್ಷ್ಮಿ ಹಾಗೂ ಕ್ಲರ್ಕ್ ಭಾಗ್ಯಮ್ಮ ದಾಸಪ್ಪ ಆಸ್ಪತ್ರೆಯಿಂದ ಮಲ್ಲೇಶ್ವರಂ ಐಪಿಪಿ ಸೆಂಟರ್‍ಗೆ ಬರೋದಕ್ಕೆ ಬಿಬಿಎಂಪಿ ಆಂಬುಲೆನ್ಸ್ ಬಳಸಿದ್ದಾರೆ. ಇನ್ನು ಈ ಬಗ್ಗೆ ಯಾಕ್ರೀ ಮೇಡಂ ಆಂಬುಲೆನ್ಸ್ ನ ಹೀಗೆ ಮಿಸ್ ಯೂಸ್ ಮಾಡಿದ್ದು ತಪ್ಪಲ್ವಾ ಅಂತಾ ಮ್ಯಾನೇಜರ್ ಶೋಭಾ ಲಕ್ಷ್ಮಿ ಅವರನ್ನು ಕೇಳಿದ್ರೆ, ಕಮಿಷಿನರ್ ಸಹಿಗಾಗಿ ಐಪಿಪಿಗೆ ಹೋಗ್ಬೇಕಿತ್ತು ಹಾಗಾಗಿ ಬಳಕೆ ಮಾಡಿದ್ದು, ಮೇಲಾಧಿಕಾರಿ ಕಲಾವತಿ ಹೇಳಿದ್ರು ಅಂತಾರೆ.

ಈ ಬಗ್ಗೆ ಆಂಬುಲೆನ್ಸ್ ನಲ್ಲಿ ಹೋಗಿ ಸೈನ್ ಮಾಡಿಸಿಕೊಂಡು ಬರೋಕೆ ಹೇಳಿದ ಆರೋಗ್ಯಾಧಿಕಾರಿ ಕಲಾವತಿ ಅವರನ್ನ ಮಾತಾಡಿಸಿದ್ರೆ, `ಸೈನ್ ಮಾಡಿಸ್ಕೋಬೇಕು ಅಂದ್ರು. ಆದ್ರೆ ನಾನು ಆಂಬುಲೆನ್ಸ್ ನಲ್ಲಿ ಬನ್ನಿ ಅಂದಿಲ್ಲ. ಹೀಗಾಗಿ ಅವರು ಆಂಬುಲೆನ್ಸ್ ನಲ್ಲಿ ಬಂದಿರೋದು ನನಗೆ ಗೊತ್ತಿಲ್ಲ. ಒಂದು ವೇಳೆ ಅವರು ಆಂಬುಲೆನ್ಸ್ ನಲ್ಲಿ ಬಂದಿದ್ದೇ ಆದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಂತಾ ಹಾರಿಕೆಯ ಉತ್ತರ ನೀಡಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ತಿಳಿದವರೇ ಈ ರೀತಿ ತುರ್ತು ಸಂದರ್ಭಕ್ಕೆ ಬಳಕೆಯಾಗಬೇಕಿದ್ದ ಆಂಬುಲೆನ್ಸ್ ನ ಇವ್ರ ವೈಯಕ್ತಿಕ ಕೆಲಸಕ್ಕೆ ಬಳಸಿದ ಇವ್ರಿಗೆ ಏನನ್ನಬೇಕೋ ಗೊತ್ತಿಲ್ಲ. ಇನ್ನು ಇವರ ವಿರುದ್ಧ ಕಮಿಷನರ್ ಮಂಜುನಾಥ್ ಪ್ರಸಾದ್ ಅವ್ರೇ ಕ್ರಮ ತೆಗೆದುಕೊಳ್ತಾರಾ ಎಂಬುವುದನ್ನ ಕಾದು ನೋಡಬೇಕು.

Comments

Leave a Reply

Your email address will not be published. Required fields are marked *